ಬಳ್ಳಾರಿ ಗಣಿಧಣಿ ಹಣೆಯ ಮೇಲೆ ಚಿಂತೆಯ ಗೆರೆ

ಸಿಇಸಿ ಮತ್ತು ಸಿಬಿಐ ಎನ್ನುವ ಪದಗಳು ಜಿಲ್ಲೆಯ ಗಣಿಧಣಿಗಳಿಗೆ ಪರಿಚಯವಾಗಿದ್ದೇ 2 ವರ್ಷಗಳ ಹಿಂದೆ. ಕರ್ನಾಟಕ - ಆಂಧ್ರದ ಗಡಿಯಲ್ಲಿಯ ಆಂಧ್ರದ ಓಬಳಾಪುರಂ ಗ್ರಾಮ ವ್ಯಾಪ್ತಿಯ ಗಣಿಗಳ - ಗಡಿಗಳ ವ್ಯವಹಾರ ತೀವ್ರ ವಿವಾದಕ್ಕೆ ಗುರಿ ಆಗಿ ಸುಪ್ರೀಂ ಕೋರ್ಟ್ ಮೊರೆ ಹೋದಾಗಲೇ ಈ ವಿಚಾರ ಚರ್ಚೆಗೆ ಬಂದದ್ದು. ಹುಬ್ಬಳ್ಳಿಯ ಸಮುದಾಯ ಪರಿವರ್ತನಾ ಸಂಸ್ಥೆಯ ಎಸ್.ಆರ್. ಹಿರೇಮಠ್ ಅವರು ಬಳ್ಳಾರಿ ಜಿಲ್ಲೆಯ ಅಕ್ರಮ - ಅನಧಿಕೃತ ಗಣಿಗಾರಿಕೆಯ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿ, ಪರಿಸರ ಕಾಳಜಿಯನ್ನು ತೋರಿದ್ದರು. ಆಗ, ಇಡೀ ವಿವಾದ ತಿರುವು ಪಡೆದು ಸುಪ್ರೀಂ ಕೋರ್ಟ್ನಲ್ಲಿ ಗ್ರೀನ್ಬೆಂಚ್ ಪ್ರಾರಂಭವಾಗಿತ್ತು.
ನಂತರ ಎಸ್.ಆರ್. ಹಿರೇಮಠ್ ಅವರು ಸಂಡೂರು ತಾಲೂಕಿನ ರಾಮಘಡ ಗಣಿ ಪ್ರದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ - ಅನಧಿಕೃತ ಗಣಿ ಚಟುವಟಿಕೆಗಳನ್ನು ಕೂಡ ತಡೆಯಬೇಕು. ಈ ರಾಮಘಡ ಗಣಿ ಪ್ರದೇಶದಲ್ಲೂ ಕೂಡ ಸುಪ್ರೀಂ ಕೋರ್ಟ್ ತನಿಖೆ ನಡೆಸಿ, ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಮತ್ತೊಂದು ದಾವೆ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ನ ಗ್ರೀನ್ಬೆಂಚ್, ರಾಮಘಡ ಗಣಿ ಪ್ರದೇಶಕ್ಕೆ ಕೂಡ ಸಿಇಸಿ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿ, ವಾಸ್ತವ ಸ್ಥಿತಿಯ ವರದಿ ಸಲ್ಲಿಸಬೇಕು ಎಂದು ಆದೇಶ ನೀಡಿತು.
ಗಣಿಗಾರಿಕೆಗೆ ಸಂಬಂಧಿಸಿದಂತೆ ರೆಡ್ಡಿ ಸಹೋದರರ ಮೇಲೆ ಎಲ್ಲಾ ಕಡೆಯಿಂದ ಪ್ರಹಾರಗಳು ಬೀಳುತ್ತಿವೆ. ಕರ್ನಾಟಕ ಅದಿರು ರಫ್ತಿನ ಮೇಲೆ ಹೇರಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ತೆರವುಗೊಳಿಸಿದ್ದರೂ, ಆಂಧ್ರಪ್ರದೇಶದಿಂದ ರೆಡ್ಡಿ ಸಹೋದರರಿಗೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನೋಟೀಸ್ ಬಂದಿದೆ. ಹಾಗು, ಏ.15ರಂದು ಸಿಇಸಿ ಸಲ್ಲಿಸಲಿರುವ ವರದಿ ಬರುವ ಮುನ್ನವೇ ಗಣಿಧಣಿಗಳು ದಿಕ್ಕೆಂಟಂತಾಗಿದ್ದಾರೆ.
ಇನ್ನು ತಮ್ಮ ಐಷಾರಾಮಿ ಬದುಕು, ವ್ಯವಹಾರ, ಆದಾಯ ಎಲ್ಲವಕ್ಕೂ ಕಡಿವಾಣ ಬೀಳಲಿದೆ ಎಂದು ಅಂದಾಜಿಸಿದ್ದ 20ಕ್ಕೂ ಹೆಚ್ಚಿನ ಗಣಿ ಕಂಪನಿಗಳ ಮಾಲೀಕರು, ಬೆಂಗಳೂರಿನ ಹೋಟೆಲ್ನಲ್ಲಿ ತುರ್ತು ಸಭೆ ನಡೆಸಿ, ಫೆಮಿಯನ್ನು ಸೇರಿಸಿಕೊಂಡು ಸಿಇಸಿಗೆ ಅಹವಾಲು ಸಲ್ಲಿಸಲು ನಿರ್ಧರಿಸಿದ್ದರು. ಇದರ ಸುಳಿವನ್ನು ಪಡೆದಿದ್ದ ಸಿಇಸಿ, ನಾವು ರಾಮಘಡಕ್ಕೆ ಆಗಮಿಸಿ, ಸಾರ್ವಜನಿಕರ ಅಹವಾಲು ಸಲ್ಲಿಕೆಗೆ ಮುಕ್ತ ಅವಕಾಶ ನೀಡಿದಾಗ ಯಾರೂ ತಮ್ಮನ್ನು ಭೇಟಿ ಮಾಡಲಿಲ್ಲ. ಉದ್ಧೇಶಪೂರ್ವಕವಾಗಿ ಸಿಇಸಿಯನ್ನು ನಿರ್ಲಕ್ಷಿಸಿ ಈಗ ಅಹವಾಲು ಸಲ್ಲಿಸಲು ದೆಹಲಿಗೆ ಆಗಮಿಸಿದ್ದೀರಿ. ಇಲ್ಲಿ ನಿಮ್ಮನ್ನು ಭೇಟಿ ಆದಲ್ಲಿ ಸಾರ್ವಜನಿಕವಾಗಿ ತಪ್ಪು ಮಾಹಿತಿ, ಸಂದೇಶ ರವಾನೆ ಆಗಲಿದೆ. ಕಾರಣ ತಮ್ಮ ಭೇಟಿಗೆ ಅವಕಾಶವಿಲ್ಲ' ಎಂದು ನಿರಾಕರಿಸಿತು.
ಇಷ್ಟಕ್ಕೇ ಸುಮ್ಮನಾಗದ ಜಿಲ್ಲೆಯ ಗಣಿ ಧಣಿಗಳು ಬುಧವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚಾಣಕ್ಯ ಭವನದ ಆಸುಪಾಸಿನಲ್ಲೇ ಸುತ್ತಾಡಿದರು. ಈ ಅವಧಿಯಲ್ಲಿ ಸಿಇಸಿ ತಂಡ ಎಸ್.ಆರ್. ಹಿರೇಮಠ ಅವರ ವಿಚಾರಣೆ ನಡೆಸಿತ್ತು. ಅಲ್ಲದೇ, ಅಕ್ರಮ - ಅನಧಿಕೃತ ಗಣಿಗಾರಿಕೆ ಕುರಿತು ಅವರಿಂದ ಮಾಹಿತಿಯನ್ನು ಸಂಗ್ರಹಿಸುತ್ತಿತ್ತು. ಸಿಇಸಿ ತಮ್ಮ ಮತ್ತು ಫೆಮಿಯ ಜಂಟಿ ಮನವಿಯನ್ನು ಸ್ವೀಕರಿಸುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಗಣಿಧಣಿಗಳು ಚಿಂತಾಕ್ರಾಂತರಾಗಿದ್ದಾರೆ.
ಇನ್ನೂ ಕೆಲವರು ಕಾರ್ಮಿಕ ಮುಖಂಡರ ಮೂಲಕ ಸಿಇಸಿ ವಿರುದ್ಧ ಪ್ರತಿಭಟನೆ ನಡೆಸಲು, ಸುಪ್ರೀಂ ಕೋರ್ಟ್ನಲ್ಲಿ ದಾವೆ ದಾಖಲಿಸಲು ಆಸಕ್ತಿ ತೋರಿದ್ದಾರೆ. ಆದರೆ, ತಮ್ಮ ಐಷಾರಾಮಿ ಬದುಕಿನಲ್ಲಿ ಕಾರ್ಮಿಕರ ಹಿತಾಸಕ್ತಿ ಕಾಪಾಡದ ಕಂಪನಿಗಳು, ಕಾರ್ಮಿಕರು ಮತ್ತು ಕಾರ್ಮಿಕ ಮುಖಂಡರ ಬೆಂಬಲವನ್ನು ಯಾವ ರೀತಿ ಪಡೆಯಲಿದ್ದಾರೆ. ಮತ್ತು ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದೇ ಪ್ರಶ್ನೆ. ಯಾವುದಕ್ಕೂ ಕಾದು ನೋಡಬೇಕಿದೆ.












Click it and Unblock the Notifications