ಮಣಿದ ಸರಕಾರ: ಅಣ್ಣಾ ಉಪವಾಸ ಶನಿವಾರಕ್ಕೆ ಅಂತ್ಯ

ಸುಮಾರು 83 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ಅಣ್ಣಾ ಅವರ ಆರೋಗ್ಯ ಸ್ಥಿರವಾಗಿದೆ. ಅಣ್ಣಾ ಹಜಾರೆ ಸಾರಥ್ಯದಲ್ಲಿ ಭಾರತದಾದ್ಯಂತ ನಡೆದ ಅಭೂತಪೂರ್ವ ಹೋರಾಟಕ್ಕೆ ಸದ್ಯಕ್ಕೆ ಮೊದಲ ಹಂತದ ಜಯ ದೊರೆತಿದೆ. ಆದರೆ ಜನ ಲೋಕಪಾಲ ಮಸೂದೆಯು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಂಡನೆಯಾಗಿ ಕಾನೂನು ಸ್ವರೂಪ ಪಡೆದ ಬಳಿಕವಷ್ಟೇ ದೇಶದ ಜನತೆ ಸಂತಸ ಪಡಬಹುದಾಗಿದೆ.
ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಅಂತೂ ಇಂತೂ ಸ್ಪಂದಿಸಿರುವ ಕೇಂದ್ರ ಸರಕಾರ, ಬಿಗಿಯಾದ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೆ ತರುವ ಸಲುವಾಗಿ 10 ಸದಸ್ಯರ ಸಮಿತಿಯನ್ನು ರಚಿಸಲು ತೀರ್ಮಾನಿಸಿದೆ. ಐದು ಮಂದಿ ಕೇಂದ್ರ ಸಚಿವರು ಮತ್ತು ಅಣ್ಣಾ ಹಜಾರೆ ಅವರು ಸಹಮತದೊಂದಿಗೆ ನಾಗರಿಕ ಸಮಾಜ ವತಿಯಿಂದ ಐದು ಮಂದಿ ಸಮಿತಿಯಲ್ಲಿ ಸ್ಥಾನ ಪಡೆಯಲಿದ್ದಾರೆ. ಸಮಿತಿಯ ಸದಸ್ಯರಾಗಿರುವಂತೆ ಹಜಾರೆ ಅವರಿಗೂ ಸರಕಾರ ಆಹ್ವಾನ ನೀಡಿದೆ.
ಸರಕಾರದ ಪ್ರಸ್ತಾವನೆಗೆ ಹಜಾರೆ ಬೆಂಬಲಿಗರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸರಕಾರ ಅಧಿಸೂಚನೆಯನ್ನೇ ಹೊರಡಿಸಬೇಕು ಎಂಬ ಪಟ್ಟನ್ನು ಬೆಂಬಲಿಗರು ಸಡಿಲಿಸಿದ್ದು ಸರಕಾರಿ ಆದೇಶವನ್ನು ಹೊರಡಿಸಿದರೆ ಸಾಕು ಎಂದು ಸೂಚಿಸಿದ್ದಾರೆ. ಆದರೆ ಸಮಿತಿಗೆ ಸಹ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ವಿಧಿಸಿದ್ದ ಹೊಸ ಷರತ್ತಿಗೂ ಸರಕಾರ ಅನುಮೋದನೆ ನೀಡಿದೆ. ಶಾಂತಿ ಭೂಷಣ್ ಅವರು ಸಮಿತಿಯ ಸಹ ಅಧ್ಯಕ್ಷರಾಗಿರುತ್ತಾರೆ. ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇದೇ ವೇಳೆ, ಸಮಿತಿಯಲ್ಲಿ ಸದಸ್ಯನಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದರೆ ಖಂಡಿತಾ ಅಹ್ವಾನವನ್ನು ಒಪ್ಪಿಕೊಳ್ಳುವೆ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.
ಕರಡು ಮಸೂದೆಯ ಸಂಚಾಲಕರಾಗಿ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ನೇಮಕಗೊಂಡಿದ್ದಾರೆ. ಹಜಾರೆ ಅವರ ಬಹುತೇಕ ಬೇಡಿಕೆಗಳಿಗೆ ಸರಕಾರ ಅಸ್ತು ಎಂದಿದೆ. ಇದೇ ವೇಳೆ ಶುಕ್ರವಾರ ಮಧ್ಯಾಹ್ನ ಪತ್ರಕರ್ತರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ಸರಕಾರವನ್ನು ಬ್ಲ್ಯಾಕ್ ಮೇಲೆ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.
ಹಜಾರೆ ಅವರ ಉಪವಾಸ ಸತ್ಯಾಗ್ರಹ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಭ್ರಷ್ಟಾಚಾರದ ವಿರುದ್ಧ ಅವರು ಊದಿರುವ ಕಹಳೆಗೆ ಇಡೀ ದೇಶ ಮಾರ್ದನಿಸುತ್ತಿದೆ. ಯಡಿಯೂರಪ್ಪ, ಅಮಿತಾಬ್ ಬಚ್ಚನ್, ಬಾಬಾ ರಾಮ್ ದೇವ್ ಸೇರಿದಂತೆ ಗಣ್ಯರು ಮತ್ತು ನಗಣ್ಯರು ಎಂಬ ಬೇಧವಿಲ್ಲದೆ ಲಂಚ ಲೋಕಕ್ಕೆ ಧಿಕ್ಕಾರ ಕೂಗುತ್ತಿರುವ ವರದಿಗಳು ದೇಶದ ನಾನಾ ಮೂಲೆಗಳಿಂದ ಮೊಳಗುತ್ತಿದೆ.
ಕರ್ನಾಟಕದ ಪ್ರಜೆಗಳೂ ಕೂಡ ಈ ಪೂತನಿ ಸಂಹಾರದಲ್ಲಿ ಪಾಲ್ಗೊಳ್ಳುವುದಕ್ಕೆ ಹಿಂದೆ ಬಿದ್ದಿಲ್ಲ. ಬೆಂಗಳೂರೂ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಶುಕ್ರವಾರ ಲಂಚ ವಿರೋಧಿ ಮೆರವಣಿಗೆಗಳು, ಸಭೆಗಳು ನಡೆದವು. ಪಾರ್ಥೇನಿಯಂ ರೀತಿ ಸರ್ವಾಂತರ್ಯಾಮಿಯಾಗಿರುವ ಲಂಚ ನಿರ್ಮೂಲನ ಮಾಡುವ ಈ ರಾಷ್ಟ್ರೀಯ ಯಜ್ಞದಲ್ಲಿ ನಮ್ಮ, ನಿಮ್ಮಂಥವರಿಗೆ ಜಯ ಯಾವತ್ತೂ ಸಿಗುತ್ತದೆ ಎಂದು ಕಾಯೋಣ.












Click it and Unblock the Notifications