ಭಾರತ: ಯಾರನ್ನ ಆಡಿಸೋದು, ಯಾರನ್ನು ಬಿಡೋದು!?
ಮುಂಬೈ, ಮಾ. 31: ಪಾಕಿಸ್ತಾನದ ವಿರುದ್ಧ ಜಯಬೇರಿ ಬಾರಿಸಿದ ಭಾರತ ತಂಡ ಈಗ ಪೀಕಲಾಟಕ್ಕೆ ಸಿಕ್ಕಿಕೊಂಡಿದೆ. ಎಲ್ರೂ ಚೆನ್ನಾಗೇ ಆಡ್ತಿದ್ದಾರೆ. ಯಾರನ್ನು ಆಡಿಸೋದು, ಯಾರನ್ನ ಬಿಡೋದು ಎಂಬ ಮೂಲ ಪ್ರಶ್ನೆ ಉದ್ಭವಿಸಿದೆ. ಬೌಲಿಂಗ್ ಮಟ್ಟಿಗೆ ಹೇಳುವುದಾದರೆ ಮೂವರೂ ವೇಗಿಗಳು ಉತ್ತಮ ಫಾರಂನಲ್ಲಿದ್ದಾರೆ. ಇದೇ ವೇಳೆ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ಆಡಿಸಬೇಕಾದ ಸಂದಿಗ್ಧ ಪರಿಸ್ಥಿತಿಯೂ ಇದೆ. ಶ್ರೀಲಂಕಾ ದಾಂಡಿಗರನ್ನು ಕಟ್ಟಿಹಾಕಬೇಕೆಂದರೆ ಸ್ಪಿನ್ ಬೌಲರ್ ಗೂ ಮೊರೆಹೋಗುವುದು ಅನಿವಾರ್ಯ. ನೆಹ್ರಾ ಬೆರಳು ಮುರಿದುಕೊಂಡಿದ್ದು ಫೈನಲ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಸೆಮೀಸ್ ನಲ್ಲಿ ಮೊಹಾಲಿ ಪಿಚ್ ಅನ್ನು ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲ. ಅಲ್ಲಿ ಒಂಚೂರು ಎಡವಟ್ಟಾಯಿತಾದರೂ ಸದ್ಯ ಅಂಥ ಪ್ರಮಾದವೇನೂ ಆಗಲಿಲ್ಲ. ಮೂವರು ವೇಗಿಗಳ ಜತೆಗೆ ಬಜ್ಜಿಯನ್ನು ಆಡಿಸುವ ಮತ್ತು ಅಶ್ವಿನ್ ರನ್ನು ಕೈಬಿಡುವ ತೀರ್ಮಾನ ಸಂಜಸವಾಗಿರಲಿಲ್ಲ ಎಂಬುದನ್ನು ಪಂದ್ಯದ ಬಳಿಕ ಧೋನಿ ಒಪ್ಪಿಕೊಂಡಿದ್ದಾರೆ.
ಸೆಮೀಸ್ ಗೆ ಮುನ್ನ ಆಡಿದ ಎರಡೂ ಪಂದ್ಯಗಳಲ್ಲಿ ಅಶ್ವಿನ್ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಆದರೆ ಸೆಮೀಸ್ ನಲ್ಲಿ ತಂಡದೊಳಕ್ಕೆ ನುಸುಳಿದ ನೆಹ್ರಾ ಪಾಕ್ ವಿರುದ್ಧ ಮಿತವ್ಯಯಿ ಜತೆಗೆ ಎರಡು ವಿಕೆಟ್ ಸಹ ಕಬಳಿಸಿ ತಂಡದ ಚಿಂತಕರ ಚಾವಡಿಗೆ ಸಡ್ಡು ಹೊಡೆದಿದ್ದಾರೆ. ಧೋನಿಗೆ ಇದು ಸಮಾಧಾನ ತಂದಿದೆಯಾದರೂ ಆಯ್ಕೆ ಸಮಸ್ಯೆಯನ್ನೂ ತಂದೊಡ್ಡಿದೆ.
ಈ ಮಧ್ಯೆ, ಹಾಲಿ ವಿಶ್ವ ಕಪ್ ನಲ್ಲಿ ಹರ್ಬಜನ್ ಸಿಂಗ್ ಭಾರಿ ಭರವಸೆ ಮೂಡಿಸಿದ್ದರಾದರೂ ಒಂದಷ್ಟು ಸಮಸ್ಯೆಯಾಗಿ ಕಾಡುತ್ತಿದ್ದಾರೆ. ಕಳಪೆ ಪ್ರದರ್ಶನ ಬಾಧಿಸುತ್ತಿದೆ. ಅವರನ್ನು ಫೈನಲ್ ಪಂದ್ಯದಿಂದ ಕೈಬಿಡುವ ಸಾಧ್ಯತೆಯೂ ಇದೆ. ಆದರೆ ಧೋನಿ ಈ ಬಗ್ಗೆ ಇನ್ನೂ ಏನನ್ನೂ ಹೇಳಿಲ್ಲ.
ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವಾಗ ಪಿಚ್ ಅಂಶವೇ ನಿರ್ಣಾಯಕವಾಗುತ್ತದೆ ಎನ್ನುತ್ತಾರೆ ಧೋನಿ. ನವೀಕೃತ ವಾಂಖೇಡೆ ಸ್ಟೇಡಿಯಂನಲ್ಲಿ ಪಿಚ್ ಸದ್ಯಕ್ಕೆ ನಿಧಾನಗತಿಯಲ್ಲಿರುವಂತೆ ಭಾಸವಾಗಿದೆ. ಫೈನಲ್ ಆಗಿರುವುದರಿಂದ ಆಯ್ಕೆ ಕಸರತ್ತು ಎಚ್ಚರದಿಂದ ನಡೆಯಬೇಕು.












Click it and Unblock the Notifications