ಯುವರಾಜ್, ಜಹೀರರತ್ತ ಜಾಹೀರಾತು ಸುನಾಮಿ
ಮುಂಬೈ, ಮಾ. 29: ವಿಶ್ವ ಕಪ್ ವಿಜಯದುಂದುಭಿ ಮೊಳಗಿಸಲು ಭಾರತಕ್ಕೆ ಇನ್ನು ಎರಡೇ ಸುತ್ತು ಬಾಕಿಯಿದೆ. ಆದರೆ ತಂಡದ ಎರಡು ಧ್ರುವ ತಾರೆಗಳ (ಸಾಮಾನ್ಯವಾಗಿ, ಧ್ರುವ ತಾರೆ ಇರುವುದು ಒಂದೇ) ಜಾಹೀರಾತು ಲೆಕ್ಕ ತಾರೆಗಳಂತೆಯೆ ಅಗಣಿತವಾಗತೊಡಗಿದೆ. ಯಾರಪ್ಪಾ ಆ ಎರಡು ತಾರೆಗಳು ಎಂಬುದು ನಿಮಗೂ ತಿಳಿದಿರಬಹುದು. ಅವರೇ, ವಿಶೇಷ ಶಕ್ತಿಯ ಪ್ರೇರಣೆಯಲ್ಲಿರುವ ಯುವರಾಜ್ ಸಿಂಗ್ ಮತ್ತು ಮಿಸ್ಟರ್ ಡಿಪೆಂಡೆಂಟ್ ಜಹೀರ್ ಖಾನ್.
ನೂರ್ಕೋಟಿ ಜನರ ಆಶಯದಂತೆ ಯುವರಾಜ್ ಭಾರತದ ಪರ ಕಪ್ ಎತ್ತಿಹಿಡಿದರೆ ಕ್ರೆಸ್ಟ್ ಗೆಟ್ ಮುರಿದು ಜಾಹೀರಾತು ಹೊಳೆ ಹರಿಯಲಿದೆ. ಅದೇ ರೀತಿ ಜಹೀರ್ ಖಾನ್ ಪಾಕ್ ಬ್ಯಾಟಿಂಗ್ ಕೋಟೆಯನ್ನು ಛಿದ್ರಗೊಳಿಸಿದರೆ ಮಾರುಕಟ್ಟೆಯಲ್ಲಿನ ಬ್ರ್ಯಾಂಡ್ ಗಳು ಹಿಂದೆಂದೂ ಕಾಣದ ರೀತಿಯಲ್ಲಿ ಜಹೀರರನ್ನು ಜಾಹೀರಾತು ಉತ್ತುಂಗಕ್ಕೆ ಕೊಂಡೊಯ್ಯಲಿದೆ. ವಿಶ್ವ್ ಕಪ್ ನಲ್ಲಿ ಅದ್ಭುತ ಪ್ರದರ್ಶನದಿಂದಾಗಿ ಯುವಕನಿಂದ ಪರಿಪಕ್ವ ಪುರುಷನಾಗಿ ವಿಕಸನಗೊಂಡಿರುವ ಯುವ್ವಿ ಬ್ರ್ಯಾಂಡ್ ಸಹ ವಿಕಸನಗೊಳ್ಳಲಿದೆ.
ಇನ್ನು ಈಗಾಗಲೇ ಎರಡು ಬಾರಿ ಭರ್ಜರಿ ಪ್ರದರ್ಶನ ನೀಡಿರುವ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರು ಇನ್ನೊಂದು ಬಾರಿ ಅಂತಹ ಅದ್ಭುತ ಪ್ರದರ್ಶನ ನೀಡಿದರೂ ಅವರ ಜಾಹೀರಾತು ಲೆಕ್ಕಾಚಾರ ಉಚ್ಛ್ರಾಯಕ್ಕೇರಲಿದೆ. ತಂಡದ ನಾಯಕ ಧೋನಿ ಅವರ ಜಾಹೀರಾತು ದೋಣಿಯೂ ಸರಾಗವಾಗಿ ದಡ ತಲುಪಲಿದೆ.