ಆಸೀಸ್ ಮಣಿಸಲು ಭಾರತಕ್ಕೆ ಇದು ಸಕಾಲ : ಕುಂಬ್ಳೆ
ಬೆಂಗಳೂರು, ಮಾ.23 : ಕಳೆದ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಆಸೀಸ್ ತಂಡದಲ್ಲಿದ್ದ ಜೋಶ್ ಈಗಿನ ಆಸೀಸ್ ತಂಡದಲ್ಲಿ ಕಾಣುತ್ತಿಲ್ಲ. ರಿಕಿ ಪಾಂಟಿಂಗ್ ಆದಿಯಾಗಿ ಹಲವಾರು ಆಟಗಾರರು ಲಯ ಕಳೆದುಕೊಂಡಿದ್ದಾರೆ. ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಲು ಇದು ಸಕಾಲ. ಹಾಗಾಗಿ, ನಾಳಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತವೇ ಫೇವರೀಟ್ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
2003 ಹಾಗೂ 2011ರ ಆಸೀಸ್ ತಂಡವನ್ನು ಹೋಲಿಸಿದರೆ, ಹೇಡನ್, ಗಿಲ್ ಕ್ರಿಸ್ಟ್, ಮೆಗ್ ಗ್ರಾಥ್ ರಂಥ ಮ್ಯಾಚ್ ವಿನ್ನರ್ ಗಳು ಈಗ ಕಾಣುತ್ತಿಲ್ಲ. ಬ್ರೆಟ್ ಲೀ, ಟೈಟ್ ಉತ್ತಮವಾಗಿ ಆಡುತ್ತಿದ್ದರೂ, ಮೊಟೆರಾ ಪಿಚ್ ಹೇಗೆ ವರ್ತಿಸುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಆಸ್ಟ್ರೇಲಿಯಾಗೆ ಶೇನ್ ವಾರ್ನ್ ರಂಥ ಶ್ರೇಷ್ಠ ಸ್ಪಿನ್ ಬೌಲರ್ ಕೊರತೆ ಕಾಡಲಿದೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ಭಾರತ ತಂಡ ಬ್ಯಾಟಿಂಗ್ ಪವರ್ ಪ್ಲೇ ಅನ್ನು ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. ಕೊನೆ ಓವರ್ ಗಳಲ್ಲಿ ಬೇಗನೆ ವಿಕೆಟ್ ಕಳೆದುಕೊಂಡು ನಿಗದಿತ 50 ಓವರ್ ಗೆ ಮುಂಚಿತವಾಗಿ ಔಟ್ ಆಗುತ್ತಿರುವುದನ್ನು ಸರಿಪಡಿಸಿಕೊಳ್ಳಬೇಕಿದೆ. ಆದರೂ, ವಿಶ್ವಕಪ್ ನಲ್ಲಿ ಆಸೀಸ್ ತಂಡ ಬಲಿಷ್ಠ, ಬಲಿಷ್ಠ ತಂಡವನ್ನು ಸೋಲಿಸಿದರೆ ಭಾರತಕ್ಕೆ ಮುಂದಿನ ಹಾದಿ ಸುಗಮವಾಗುತ್ತದೆ ಎಂದಿದ್ದಾರೆ.
ಪಾಕಿಸ್ತಾನಕ್ಕೆ ಮಣಿದಿರುವ ಆಸ್ಟ್ರೇಲಿಯಾದ ದೌರ್ಬಲ್ಯವನ್ನು ಭಾರತ ಚೆನ್ನಾಗಿ ಅರಿತಿದೆ. ಸತತವಾಗಿ ದಾಖಲೆಯ 34 ವಿಶ್ವಕಪ್ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಆಸ್ಟ್ರೇಲಿಯಾದ ಆತ್ಮವಿಶ್ವಾಸಕ್ಕೆ ಭಾರಿ ಪೆಟ್ಟು ಬಿದ್ದಿದೆ. ಆದರೆ, ಆಸೀಸ್ ವಿರುದ್ಧ ಗೆಲ್ಲಬೇಕಾದರೆ ಸಾಂಘಿಕ ಹೋರಾಟದ ಅಗತ್ಯವಿದೆ. ಹರ್ಭಜನ್ ಸಿಂಗ್ ಎಂದಿನಂತೆ ಆಸೀಸ್ ವಿರುದ್ಧ ತಮ್ಮ ಮ್ಯಾಜಿಕ್ ತೋರಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಕುಂಬ್ಳೆ ಹೇಳಿದರು.












Click it and Unblock the Notifications