ಗಣಿಗಾರಿಕೆಯಿಂದ ದೇವರ ಗುಡಿಗೂ ಸಂಚಕಾರ

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ದೇವಸ್ಥಾನದ ಕಾರ್ಯದರ್ಶಿಗಳು ಸಲ್ಲಿಸಿದ ದೂರನ್ನು ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಿದ ಇಲಾಖೆಯ ಸಂಸ್ಕೃತಿ ವಿಭಾಗದ ಅಧಿಕಾರಿಗಳ ತಂಡ, ಕುಮಾಸ್ವಾಮಿ ಗುಡ್ಡದಲ್ಲಿ ನಡೆಯುತ್ತಿರುವ ಗಣಿಗಾರಿಕೆಗಾಗಿ ನಡೆಯುವ ಸ್ಪೋಟವನ್ನು ಕೂಡಲೇ ಸ್ಥಗಿತಗೊಳಿಸಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಆದೇಶಿಸಿದ್ದಾರೆ.
ಕಾರ್ತಿಕೇಯ - ಪಾರ್ವತಿ ದೇವಸ್ಥಾನವು 800 ವರ್ಷಗಳಷ್ಟು ಹಳೆಯದ್ದು. ಈ ದೇವಸ್ಥಾನ ಜೀವಂತ ಸ್ಮಾರಕವಾಗಿದ್ದು, ರಾಷ್ಟ್ರೀಯ ಮಹತ್ವವನ್ನು ಪಡೆದಿದೆ. ಸಾವಿರಾರು ಭಕ್ತಾದಿಗಳು ಸಂದರ್ಶಿಸುವ ಈ ದೇವಸ್ಥಾನವನ್ನು ಸಂರಕ್ಷಿಸಿಕೊಂಡು ಬರಬೇಕಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಈ ದೇವಸ್ಥಾನಕ್ಕೆ ಸಮೀಪದಲ್ಲೇ ವ್ಯಾಪಕವಾಗಿ, ಅವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸುತ್ತಿರುವ ಬಳ್ಳಾರಿಯ ಹೊತ್ತೂರು ಟ್ರೇಡರ್ಸ್ ಗಣಿ ಕಂಪನಿಯ ಗಣಿ ಪರವಾನಿಗೆಯನ್ನು ಪುರಾತತ್ವ ಇಲಾಖೆಯ ವಿರೋಧದ ನಡುವೆಯೂ ಕೂಡ ನವೀಕರಿಸಿದ್ದೀರಿ. ಗಣಿಗಾರಿಕೆ ನಡೆಸಲು ಮುಕ್ತ ಅವಕಾಶ ನೀಡಿದ್ದೀರಿ ಎಂದು ಇಲಾಖೆ ಆಕ್ರೋಶ ವ್ಯಕ್ತಪಡಿಸಿದೆ.
ಯಾವುದೇ ಪ್ರಾಚ್ಯವಸ್ತು, ಐತಿಹಾಸಿಕ ಮಹತ್ವ ಪಡೆದ ಸ್ಮಾರಕದ 2 ಕಿಮೀ ಸುತ್ತಲು ಗಣಿಗಾರಿಕೆ ಚಟುವಟಿಕೆ ನಡೆಸಲು ಅವಕಾಶ ಇರುವುದಿಲ್ಲ. ಆದರೂ ಈ ದೇವಸ್ಥಾನದ ಸಮೀಪದಲ್ಲೇ ವ್ಯಾಪಕ ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆಗಾಗಿ ಹೊತ್ತೂರು ಟ್ರೇಡರ್ಸ್ ಭಾರೀ ಸ್ಪೋಟಕಗಳನ್ನು ಬಳಕೆ ಮಾಡುತ್ತಿದೆ. ಪ್ರತಿ ಸ್ಪೋಟಕ ಸ್ಪೋಟಗೊಂಡಾಗ ದೇವಸ್ಥಾನದ ತಳಪಾಯ (ಬುನಾದಿ) ಅದುರುತ್ತಿದೆ. ದೇವಸ್ಥಾನದ ಗೋಡೆಗಳು ಬಿರುಕುಬಿಡುತ್ತಿವೆ. ಗೋಪುರ, ರಾಜಗೋಪುರಗಳು ಧ್ವಂಸಗೊಳ್ಳುತ್ತಿವೆ. ಮೂರ್ತಿಗಳು ಕೂಡ ಮುಕ್ಕಾಗುತ್ತಿವೆ. ಇನ್ನು, ದೇವಸ್ಥಾನದ ಸುತ್ತಲೂ ಇರುವ ಕೆತ್ತನೆ ಕಾರ್ಯ ಕೂಡ ಹಾಳಾಗುತ್ತಿದೆ.
ರಾಷ್ಟ್ರೀಯ ಸ್ಮಾರಕವಾಗಿರುವ ಈ ದೇವಸ್ಥಾನವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮೇಲ್ಕಾಣಿಸಿದ ಗಣಿ ಸೇರಿ ಸುತ್ತಲಿನ ಎಲ್ಲಾ ಗಣಿ ಪ್ರದೇಶಗಳಲ್ಲಿ ಭಾರೀ ಸ್ಪೋಟಕಗಳ ಬಳಕೆಯನ್ನು ಕೂಡಲೇ ನಿಷೇಧಿಸಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಂಡು ಗಣಿಗಾರಿಕೆಯನ್ನು ಕೂಡ ಸ್ಥಗಿತಗೊಳಿಸಬೇಕು ಎಂದು ತಂಡ ಆದೇಶಿಸಿದೆ.
ಜಂಬುನಾಥ ದೇವಸ್ಥಾನ : ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿ ಇರುವ, ಹಂಪೆಯಷ್ಟೇ ಧಾರ್ಮಿಕ ಮಹತ್ವ ಪಡೆದಿರುವ ಜಂಬುನಾಥನ ಗುಡ್ಡದಲ್ಲಿಯ ಜಂಬುನಾಥ ದೇವಸ್ಥಾನದ ಸುತ್ತಲೂ ಭಾರೀ ಸ್ಪೋಟಕಗಳನ್ನು ಬಳಕೆ ಮಾಡಿ ಅವ್ಯಾಹತವಾಗಿ ಗಣಿಗಾರಿಕೆ ನಡೆಸುತ್ತಿದ್ದ 9 ಗಣಿಗಳನ್ನು ತತ್ಕ್ಷಣದಿಂದಲೇ ಸ್ಥಗಿತಗೊಳಿಸಬೇಕು. ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸಿದ ನಂತರವೇ ಈ ಗಣಿ ಕಂಪನಿಗಳ ಭವಿಷ್ಯ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಂಬುನಾಥನ ದೇವಸ್ಥಾನದ ಸುತ್ತಲಿನ 9 ಗಣಿಗಳು ಈಗಾಗಲೇ ಸ್ಥಗಿತಗೊಂಡಿವೆ.












Click it and Unblock the Notifications