ಹುಷಾರು, ಶನಿ ಭಾರತ ತಂಡದ ಹೆಗಲೇರಿದೆ!
ಬೆಂಗಳೂರು, ಮಾ. 8: ಔಟ್ ಆಫ್ ಫಾರಂ ಯುವರಾಜ ಸಿಂಗ್ ಗೆ ಶನಿ ಬೆನ್ನುಹತ್ತಿರಬೇಕು. ಅದಕ್ಕೆ ಇತ್ತೀಚೆಗೆ ಅವ ಸರಿಯಾಗಿ ಆಡುತ್ತಿಲ್ಲ ಎಂದೆಲ್ಲ ಹಲವು ನಾಲಿಗೆಗಳು ಮಾತನಾಡಿಕೊಳ್ಳುತ್ತಿರುವಾಗಲೇ ಸಾಕ್ಷಾತ್ ಆ ಶನಿದೇವರೇ ಯುವಿ ನೆರವಿಗೆ ಧಾವಿಸಿದ್ದಾರೆ. ಹಾಗಾದರೆ ಮುಂದಿನ ಪಂದ್ಯಗಳಲ್ಲಿ ಇಡೀ ಭಾರತ ತಂಡ ಉತ್ತಮ ಪ್ರದರ್ಶನ ಕಾಯ್ದುಕೊಂಡು ಕಪ್ ಗೆಲ್ಲುವಂತಾಗಲಿ 'ಥ್ಯಾಂಕ್ಸ್ ಟು ಬೆಂಗಳೂರು ಶನೇಶ್ವರ' ಎಂದು ನಗರವಾಸಿಗಳು ಹಾರೈಸಿದ್ದಾರೆ.
ಏನಾಯಿತೆಂದರೆ ಐರ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ನಮ್ಮ ಯುವಿ ಸೈಲೆಂಟಾಗಿ ವಿಲ್ಸನ್ ಗಾರ್ಡನ್ ನಲ್ಲಿರುವ ಶನಿ ಮಹಾತ್ಮನ ದೇವಸ್ಥಾನಕ್ಕೆ ತೆರಳಿ, ಅಪ್ಪಾ ಭಗವಂತಾ! ಏನಿದು ನಿನ್ನಾಟ. ನನ್ನಾಟವನ್ನು ಸ್ವಲ್ಪ ಸುಧಾರಿಸು ಎಂದು ಸಾಷ್ಟಾಂಗ ನಮಸ್ಕಾರ ಹೊಡೆದಿದ್ದೇ ಹೊಡೆದಿದ್ದು ... ಓವರ್ ಟು ಚಿನ್ನಸ್ವಾಮಿ ಕ್ರೀಡಾಂಗಣ. ಅಲ್ಲಿ ಭರ್ಜರಿ ಡಬಲ್ ಧಮಾಕಾ ಪ್ರದರ್ಶನ ನೀಡಿಯೇ ಬಿಟ್ಟರು. ಶನಿಪ್ರಭಾವ ಅಷ್ಟರಮಟ್ಟಿಗೆ ಕೆಲಸ ಮಾಡಿತ್ತು.
ಏನೋ ನೆನಪಿಗೆ ಬರುತ್ತಿದೆಯಲ್ಲ ಎಂದು ಹೆಚ್ಚು ತಲೆ ತುರಿಸಿಕೊಳ್ಳಬೇಡಿ. ಏಕೆಂದರೆ ನಮ್ಮ ಬಬ್ಜಿ ಇದ್ದಾರಲ್ಲ ಅದೇ ಹರ್ಬಜನ್ ಸಿಂಗು ಅವರೂ ಹೀಗೇಯೆ, ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಫೆಬ್ರವರಿ 26ರಂದು ಸೀದಾ ತ್ಯಾಗರಾಜ ನಗರಕ್ಕೆ ಬಂದವರೇ ಅಲ್ಲಿನ ಶನೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸುತ್ತಾ, ಅಪ್ಪಾ ಶನೇಶ್ವರ ಹೇಗಾದರೂ ಮಾಡಿ ನಮ್ಮ ತಂಡವನ್ನು ಈ ಬಾರಿ ವೀಶ್ವ ಕಪ್ ನಲ್ಲಿ ಗೆಲ್ಲಿಸಪ್ಪಾ ಎಂದು ಬೇಡಿಕೊಂಡಿದ್ದರು.
ಕೆಂಪು ಟಿ ಶರ್ಟ್, ನೀಲಿಬಣ್ಣದ ಜೀನ್ಸ್ ಧರಿಸಿದ್ದ ಯುವ್ವಿ ಸ್ಥಳೀಯ ಜತೆಗಾರನ ಜತೆಗೂಡಿ ವಿಲ್ಸನ್ ಗಾರ್ಡ್ ನಲ್ಲಿರುವ ಶನಿ ಮಹಾತ್ಮನ ದೇವಸ್ಥಾನಕ್ಕೆ ಪಂದ್ಯದ ಮುನ್ನಾ ದಿನ ಅದೂ ಶನಿ ದೇವರಿಗೆ ಪ್ರಶಸ್ತ ದಿನವಾದ ಶನಿವಾರ ಭೇಟಿ ನೀಡಿದ್ದರು. ಸುಮಾರು 15 ನಿಮಿಷ ಕಾಲ ಅಲ್ಲಿದ್ದ ಭಾರತ ಕ್ರಿಕೆಟ್ ತಂಡದ ಯುವರಾಜ ಸಿಂಗ್, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಎಳ್ಳು ದೀಪವನ್ನೂ ಹಚ್ಚಿದರು ಎಂದು ದೇವಸ್ಥಾನದ ಅರ್ಚಕ ರಾಮಚಂದ್ರ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಬೆಂಗಳೂರಿಗೆ ಬಂದಾಗಲೆಲ್ಲ ತಪ್ಪದೇ ಈ ಶನಿ ದೇವರಗುಡಿಗೆ ಬರುವುದಾಗಿ ತಿಳಿಸಿದರಂತೆ. ಮಾರನೆಯ ದಿನ ಶನಿದೇವರೇ ಆವಾಹನೆಯಾದಂತೆ ಅವರು ಆಡಿದ್ದನ್ನು ನೋಡಿದರೆ ಯುವ್ವಿ ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ, ಅಲ್ವೆ!? ಅಂದ ಹಾಗೆ, ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಮೊದಲು ಐದು ವಿಕೆಟ್ ಪಡೆದು ನಂತರ ಅರ್ಧ ಶತಕವನ್ನೂ ಸಿಡಿಸಿದರು. ವಿಶ್ವ ಕಪ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮೆರೆದ ಏಕೈಕ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು.












Click it and Unblock the Notifications