ಒಮಾನ್ ನಲ್ಲಿ ಭುಗಿಲೆದ್ದ ಆಂತರಿಕ ಹಿಂಸಾಚಾರ

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯೇನಂದರೆ, ಒಮಾನಿ ಪ್ರಜೆಗಳಿಗೆ ಹೆಚ್ಚಿನ ಉದ್ಯೋಗಾವಕಾಶ, ವೇತನದಲ್ಲಿ ಹೆಚ್ಚಳ, ಏರುತ್ತಿರುವ ಬೆಲೆಗಳ ಮೇಲೆ ನಿಯಂತ್ರಣ, ಖಾಸಗಿ ವಲಯದಲ್ಲಿ ಹೆಚ್ಚಿನ ಉದ್ಯೋಗ ಭದ್ರತೆ ಮತ್ತು ಎಲ್ಲರಿಗೂ ಸರಿಸಮನಾದ ವೇತನ. ಹಾಗು ತೈಲದ ಆದಾಯವನ್ನು ಪ್ರತಿಯೊಬ್ಬರಿಗೂ ಸಮನಾಗಿ ಹಂಚಬೇಕು ಹಾಗು ವಲಸೆಗಾರರನ್ನು ನಿಯಂತ್ರಿಸಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ನೂರಾರು ಸ್ಥಳೀಯರು ದುಬೈ - ಮಸ್ಕತ್ ಹೈವೇಯನ್ನು ಬಂದ್ ಮಾಡಿ, ಎಲ್ಲೆಡೆ ಪ್ರತಿಭಟನೆ ಮಾಡುತಿದ್ದಾರೆ. ಕೆಲ ಕಾರುಗಳನ್ನು ಸುಟ್ಟು ಹಾಕಿದ್ದು, ಕೆಲ ಮಳಿಗೆಗಳಿಗೆ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ. ಪೊಲೀಸರು ಅಶ್ರುವಾಯುವನ್ನು ಸಿಡಿಸಿ ಗುಂಪನ್ನು ಚದುರಿಸಲು ಪ್ರಯತ್ನ ನಡೆಸಿದ್ದು, ಹಲವರು ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲ ವೈದ್ಯರ ಪ್ರಕಾರ ಗಾಯಗೊಂಡವರಲ್ಲಿ ಆರು ಜನ ಮೃತಪಟ್ಟಿದ್ದಾರೆ.
ಈ ಮಧ್ಯೆ, ಸುಲ್ತಾನ್ ಸರಕಾರದಲ್ಲಿ ಭಾರಿ ಬದಲಾವಣೆ ಮಾಡಿದ್ದು, ಪ್ರತಿಭಟನಾಕಾರರ ಬೇಡಿಕೆಯನ್ನು ಈಡೇರಿಸುವ ಪ್ರಯತ್ನವನ್ನು ನಡೆಸಿದ್ದಾರೆ. ಎಲ್ಲ ಪ್ರಾಂತ್ಯಗಳಲ್ಲಿ ಹೆಚ್ಚುವರಿ ಗವರ್ನರ್ ಗಳನ್ನು ನೇಮಿಸಲಾಗಿದ್ದು, ಆರು ಜನ ಮಂತ್ರಿಗಳನ್ನು ಬದಲಾಯಿಸಿದ್ದಾರೆ. 84 ಜನರಿರುವ ಸಲಹಾ ಮಂಡಳಿಯನ್ನು ನೇಮಕ ಮಾಡಲಾಗಿದ್ದು, ಜನರ ಕುಂದುಕೊರತೆಗಳನ್ನು ನಿವಾರಿಸಲು ಎಲ್ಲ ಪ್ರಾಂತ್ಯದ ಗವರ್ನರ್ ಗಳಿಗೆ ಸೂಚಿಸಿದ್ದಾರೆ. ಆದರೆ ಪ್ರತಿಭಟನಾಕಾರರು, ಜನರಿಂದ ನೇಮಕಗೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ನಿವೇದಿಸಿಕೊಂಡಿದ್ದಾರೆ.
ಕಳೆದ ವರ್ಷ ಪಕ್ಕದ ದುಬೈನಲ್ಲಿ ಆದ ಆರ್ಥಿಕ ಹಿಂಜರಿತ ಕೂಡ ಒಮಾನ್ ನನ್ನು ಕಂಗೆಡಿಸಿರಲಿಲ್ಲ. ಯಾವುದೇ ಏರಿಳಿತವಿಲ್ಲದೆ, ಅತ್ಯಂತ ಜಾಣ್ಮೆಯಿಂದ ಹಣಕಾಸಿನ ಪರಿಸ್ಥಿತಿಯನ್ನು ಇಲ್ಲಿನ ಸರಕಾರ ನಿಭಾಯಿಸುತ್ತಿದೆ. ಈಜಿಪ್ತ್, ತುನಿಶಿಯಾ, ಲಿಬಿಯಾ ಹಾಗು ಬಹರೈನ್ ನಂತಹ ಅರಬ್ ದೇಶಗಳಲ್ಲಾಗುತ್ತಿರುವ ಬದಲಾವಣೆಗೆ ಒಮಾನ್ ಪ್ರಜೆಗಳು ಸಹ ಆಶಿಸುತಿದ್ದಾರೆ.
ಕಳೆದ ನಲವತ್ತು ವರ್ಷಗಳಲ್ಲಿ ಸುಲ್ತಾನ್ ಕಾಬುಸ್ ಬಿನ್ ಸಯೀದ್ ಅವರ ಆಳ್ವಿಕೆಯಲ್ಲಿ ಇದೇ ಮೊದಲ ಬಾರಿ ಈ ಪರಿಯ ಪ್ರತಿಭಟನೆಯ ಬಿಸಿ ತಾಕಿದೆ. ಒಮಾನ್ ಕೇವಲ 29 ಲಕ್ಷ ಜನಸಂಖ್ಯೆಯಿರುವ ದೇಶ. ಅದರಲ್ಲಿ 7 ಲಕ್ಷ ಜನ ಬೇರೆ ದೇಶಗಳಿಂದ ಉದ್ಯೋಗವನ್ನು ಅರಿಸಿಕೊಂಡು ಬಂದಿದ್ದಾರೆ. ಅತಿ ಹೆಚ್ಚು ವಲಸೆಗಾರರಲ್ಲಿ ಹೆಚ್ಚಿನವರು ಭಾರತೀಯರು, ಅವರಲ್ಲಿ ಬಹುಪಾಲು ಕೇರಳದವರು. ಪಕ್ಕದ ಯಾವುದೇ ದೇಶದಲ್ಲಿ ಇಲ್ಲದ ಉದ್ಯೋಗ ಮೀಸಲಾತಿ ಒಮಾನ್ ನಲ್ಲಿ ಸ್ಥಳೀಯರಿಗೆ ಎಲ್ಲ ವಲಯಗಳಲ್ಲಿ ನೀಡಲಾಗಿದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿದ ಮೊದಲ ಅರಬ್ ರಾಷ್ಟ್ರ ಒಮಾನ್. ಆದರೂ ಇಲ್ಲಿನ ಗಲಾಟೆಗಳು ಎಲ್ಲರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.












Click it and Unblock the Notifications