ಸುಸೂತ್ರವಾಗಿ ಜರುಗುವುದೇ ವಿಧಾನಸಭೆ ಅಧಿವೇಶನ?

ಸುಸೂತ್ರವಾಗಿ ಜರುಗುವುದೆ? : ಶತಾಯಗತಾಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಪದಚ್ಯುತಿಗೊಳಿಸಲು ಮತ್ತು ಸರಕಾರವನ್ನು ಬೀಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಐದು ವರ್ಷ ಆಳಿಯೇ ತೀರುತ್ತೇನೆ ಎಂದು ಯಡಿಯೂರಪ್ಪ ಪ್ರತಿಪಕ್ಷಗಳಿಗೆ ಸೆಡ್ಡುಹೊಡೆದಿದ್ದರೆ, ಅದ್ಹೇಗೆ ಮುಂದುವರಿಯುತ್ತೀರಿ ನೋಡ್ತೀವಿ ಎಂದು ವಿರೋಧ ಪಕ್ಷಗಳು ಕುಸ್ತಿಗೆ ಸಿದ್ಧವಾಗಿ ನಿಂತಿವೆ.
ದಾಖಲೆ ಹಿಡಿದು ಚರ್ಚೆಗೆ ಬನ್ನಿ ಎಂದು ಯಡಿಯೂರಪ್ಪ ಆಹ್ವಾನ ನೀಡುತ್ತಿದ್ದರೆ, ಚರ್ಚೆಗೆ ಯಡಿಯೂರಪ್ಪನವರೆಲ್ಲಿ ಅವಕಾಶ ನೀಡುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ. ಕಳೆದ ಜನವರಿಯಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ಗಂಟೆ, ಜಾಗಟೆಗಳು ಸದ್ದು ಮಾಡಿದ್ದವೇ ಹೊರತು ಯಾವುದೇ ವಿಷಯ ಕುರಿತು ಸಕಾರಾತ್ಮಕ ಚರ್ಚೆ ನಡೆದಿರಲಿಲ್ಲ.
ನಾನಾ ಹಗರಣಗಳ ಕುರಿತು ಚರ್ಚೆಗೆ ಬೋಪಯ್ಯನವರೇ ಅವಕಾಶ ನೀಡಲಿಲ್ಲ ಎಂದು ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದ್ದವು. ಸ್ವಜನ ಪಕ್ಷಪಾತ, ಭೂ ಹಗರಣ, ಭ್ರಷ್ಟಾಚಾರದ ಅಸ್ತ್ರ ಹಿಡಿದು ವಿರೋಧ ಪಕ್ಷಗಳಾಗಲೇ ಸಿದ್ದವಾಗಿ ನಿಂತಿವೆ. ಪರಿಸ್ಥಿತಿ ಹೀಗಿರುವಾಗ, ಈ ಅಧಿವೇಶನವಾದರೂ ಸುಸೂತ್ರವಾಗಿ ಜರುಗುವುದೆ? ಎಂಬುದೇ ಸದ್ಯದ ಪ್ರಶ್ನೆ.
ಸದನವು ಸೂಸೂತ್ರವಾಗಿ ನಡೆಯುವ ಸಂಬಂಧ ತಾವು ಫೆಬ್ರವರಿ 25ರಂದು ಎಲ್ಲ ಪಕ್ಷಗಳ ಮುಖಂಡರುಗಳೊಡನೆ ಸಭೆ ನಡೆಸಲಿರುವುದಾಗಿ ಸಭಾಧ್ಯಕ್ಷರು ತಿಳಿಸಿದ್ದಾರೆ. ಫೆಬ್ರವರಿ 25ರಂದು ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಂತರ ಕಲಾಪಗಳು ಜರುಗಲಿವೆ.
ಯಾವ್ಯಾವ ವಿಧೇಯಕ ಮಂಡನೆ? : ಈಗಾಗಲೆ ಮಂಡನೆಯಾಗಿರುವ ಕರ್ನಾಟಕ ಪಂಚಾಯತ್ರಾಜ್ (ತಿದ್ದುಪಡಿ) ವಿಧೇಯಕ 2007 ಮತ್ತು ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾ)ತಿದ್ದುಪಡಿ ವಿಧೇಯಕ 2001ಗಳನ್ನು ಪುನರ್ಪರಿಶೀಲನೆಗಾಗಿ ಮಂಡಿಸಲಾಗುತ್ತದೆಂದು ತಿಳಿಸಿದರು.
ಮಾರ್ಚ್ 1, 2010ರಂದು ಮಂಡನೆಯಾಗಿರುವ ಭೂಸ್ವಾಧೀನ (ಕರ್ನಾಟಕ ತಿದ್ದುಪಡಿ) ವಿಧೇಯಕ 2009, ಮಾರ್ಚ್ 17, 2010ರಂದು ಮಂಡನೆಯಾಗಿರುವ ಕರ್ನಾಟಕ (ಪ್ರಾದೇಶಿಕ ಕಾನೂನುಗಳ) ನಿರಸನಗೊಳಿಸುವ ಮತ್ತು ತಿದ್ದುಪಡಿ ಮಾಡುವ ವಿಧೇಯಕ 2009 ಸಹ ಬಾಕಿ ಇದೆ.
ಇದೀಗ ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ (ತಿದ್ದುಪಡಿ) ವಿಧೇಯಕ 2011, ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಹಾಗೂ ನಿಯಂತ್ರಣ) ವಿಧೇಯಕ ಮತ್ತು ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2011ನೇ ಅಧಿವೇಶನದಲ್ಲಿ ಮಂಡನೆಯಾಗಲಿವೆಯೆಂದು ಸಭಾಧ್ಯಕ್ಷರು ತಿಳಿಸಿದರು.












Click it and Unblock the Notifications