ವಿದ್ಯಾರ್ಥಿನಿ ಚುಡಾಯಿಸಿದ್ದಕ್ಕೆ ವಾಹನಗಳು ಧ್ವಂಸ

ಆನೇಕಲ್, ಫೆ.2: ಅತ್ತಿಬೆಲೆಯ ಸಂತ ಫಿಲೋಮಿನಾ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ದಲಿತ ಯುವಕನೊಬ್ಬ ಸವರ್ಣೀಯ ಹುಡುಗಿಯೊಬ್ಬಳನ್ನು ಛೇಡಿಸಿದ್ದಾನೆ ಎಂದು ಆರೋಪಿಸಿದ ಒಂದು ಗುಂಪು ಮತ್ತೊಂದು ಗುಂಪಿನ ದ್ವಿಚಕ್ರವಾಹನಗಳಿಗೆ ಕಲ್ಲು ತೂರಿ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಸುಮಾರು 10ಕ್ಕೂ ಅಧಿಕ ಬೈಕುಗಳು ಬೆಂಕಿಗೆ ಆಹುತಿಯಾಗಿದೆ.

ಎರಡು ಗುಂಪುಗಳ ನಡುವೆ ಕ್ಷುಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಎಸ್ಪಿ ಡಾ.ಮಹೇಶ್, ಹೆಚ್ಚುವರಿ ಎಸ್ಪಿ ಸುಭಾಷ್ ಗುಡಿಮನಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ದಲಿತ ಯುವಕನೊಬ್ಬ ಸವರ್ಣೀಯ ಹುಡುಗಿಯೊಬ್ಬಳನ್ನು ಛೇಡಿಸಿದ್ದಾನೆ ಎಂದು ಆರೋಪಿಸಿ ಸವರ್ಣೀಯ ಗುಂಪು ರಾತ್ರಿವೇಳೆ ದಲಿತ ಕಾಲನಿಯ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದಾಗ ದಲಿತ ಕೇರಿ ಹುಡುಗರು ಸವರ್ಣೀಯ ಹುಡುಗರನ್ನು ಹೊಡೆದೋಡಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎರಡೂ ಗುಂಪುಗಳ ನಡುವೆ ರಾಜಿ ಸಂಧಾನ ಮಾಡಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಸವರ್ಣೀಯ ಹುಡುಗಿಯನ್ನು ಛೇಡಿಸಿದ ಹುಡುಗನನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ದಲಿತ ಮುಖಂಡರು, ದಲಿತ ಕೇರಿಗೆ ನುಗ್ಗಿದ ಸವರ್ಣೀಯರನ್ನು ಬಂಧಿಸುವಂತೆ ಒತ್ತಾಯಿಸಿದ್ದರು.

ಹೊರಗಿನವರ ಕೈವಾಡ: ಈ ನಡುವೆ ಚಂದಾಪುರ ಭಾಗದಲ್ಲಿನ ಸವರ್ಣೀಯ ಹುಡುಗರ ಗುಂಪು ಅತ್ತಿಬೆಲೆ ವೃತ್ತದಲ್ಲಿ ಮಾರಕಾಸ್ತ್ರಗಳೊಂದಿಗೆ ಜಮಾಯಿಸಿದ್ದರು. ಆದರೆ ಇದೇ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ಕೆಲ ದುಷ್ಕರ್ಮಿಗಳು ಸ್ಥಳದಲ್ಲಿದ್ದ ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಎಸ್ಪಿ ಡಾ.ಮಹೇಶ್, ಹೆಚ್ಚುವರಿ ಎಸ್ಪಿ ಸುಭಾಷ್ ಗುಡಿಮನಿ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಲಘು ಲಾಠಿ ಪ್ರಹಾರ ನಡೆಸಿದರು.

ದಲಿತರು ಹಾಗೂ ಸವರ್ಣೆಯರ ನಡುವೆ ಠಾಣೆಯಲ್ಲಿ ರಾಜಿ ಸಂಧಾನವಾಗಿದ್ದರೂ ಹೊರಗಿನಿಂದ ಬಂದ ಯುವಕರು ದಾಂಧಲೆ ನಡೆಸಿದ್ದೇ ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣ. ಈಗ ಪರಿಸ್ಥಿತಿ ತಿಳಿಯಾಗಿದೆ ಎಂದು ಎಸ್ಪಿ ಸುಭಾಷ್ ಗುಡಿಮನಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+