Get Updates
Get notified of breaking news, exclusive insights, and must-see stories!

ಮೈಸೂರಿನ ನಮ್ಮ ಮಹಾರಾಜರ ಶಾಲೆಗೆ 175

Cartoonist RK Laxman studied at Maharaja's high school, Mysore
ಮೈಸೂರಿನ ಅತ್ಯಂತ ಹಳೆಯ ವಿದ್ಯಾಮಂದಿರವೆನಿಸಿರುವ ಮಹಾರಾಜಾ ಶಾಲೆಗೆ ಇದೀಗ 175 ವರ್ಷಗಳು ತುಂಬಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾಶ್ರಯ ನೀಡಿದ ಈ ಶಾಲೆ ನಮ್ಮ ಕನ್ನಡನಾಡಿನ ಹೆಮ್ಮೆಯ ಸಂಸ್ಥೆಗಳಲ್ಲಿ ಒಂದೆನೆಸಿದೆ. ಇಂಥ ಶಾಲೆಗಳಲ್ಲಿ ಕಲಿತು ಬೆಳೆದ ಕೆಲವು ಹಳೆಯ ವಿದ್ಯಾರ್ಥಿಗಳು ಶಾಲೆಯ ಪುರೋಭಿವೃದ್ಧಿಗೆ ಕಿಂಚಿತ್ತು ಪ್ರೋತ್ಸಾಹ ನೀಡಿ ಜನ್ಮ ಸಾರ್ಥಕವಾಯಿತು ಎಂದು ಭಾವಿಸಿಕೊಳ್ಳುತ್ತಾರೆ.

ನಮ್ಮ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಈ ಶಾಲೆಯಲ್ಲಿ ಕಲಿತವರನೇನಲ್ಲ. ಆದರೆ ಮೈಸೂರಿಗೆ ಅಷ್ಟೇನೂ ದೂರವಿಲ್ಲದ ಬೂಕನಕೆರೆಯಲ್ಲಿ ವಿದ್ಯಾಭ್ಯಾಸ ಮಾಡಿದವರು. ಹಾಗಾಗಿ ಶೈಕ್ಷಣಿಕ ಕ್ಷೇತ್ರದ ಸವಾಲುಗಳ ಹಿನ್ನೆಲೆಯಲ್ಲಿ ಮಹಾರಾಜಾ ಶಾಲೆಯ ಇತಿಹಾಸ, ಕೊಡುಗೆ ಮತ್ತು ಅದರ ಮಹತ್ವವನ್ನು ಅರಿತವರಾಗಿದ್ದಾರೆ.

ಜನವರಿ 27ರ ಗುರುವಾರ ಅವರು ನಮ್ಮ ಹಳೆಯ ಶಾಲೆಗೆ ಬಂದಿದ್ದರು. ಶಾಲೆಯ 175ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಒಂದು ಭವ್ಯವಾದ ಸಭಾಗಂಣವನ್ನು ಶಾಲೆಗೆ ಕಟ್ಟಿಸಿಕೊಡುವ ಘೋಷಣೆ ಮಾಡಿದರು. ಇದಕ್ಕಾಗಿ 5 ಕೋಟಿ ರೂಪಾಯಿಗಳ ಅನುದಾನ ಪ್ರಕಟಿಸಿದ್ದಲ್ಲದೆ ಸಭಾಂಗಣ ನಿರ್ಮಾಣವನ್ನು ಒಂದು ವರ್ಷದೊಳಗೆ ಪೂರೈಸಬೇಕಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ಕಟ್ಟಡ ನಿರ್ಮಾಣ ಮುಗಿದ ನಂತರ ಮತ್ತೊಮ್ಮೆ ಇಲ್ಲಿಗೆ ಬಂದು ಸಭಾಂಗಣ ಉದ್ಘಾಟನೆಯನ್ನು ತಾವೇ ನೆರವೇರಿಸುವುದಾಗಿಯೂ ಅವರು ಭರವಸೆ ನೀಡಿದರು.

ಮುಮ್ಮಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮಹಾರಾಜ ಶಾಲೆ ಉಚಿತ ವಿದ್ಯಾದಾನಕ್ಕೆ ಹೆಸರುವಾಸಿಯಾದ ಸಂಸ್ಥೆ. ಇಂದಿನ ಡೊನೇಷನ್ ಪ್ರಪಂಚದಲ್ಲಿ ಇಂಥ ಶಾಲೆಗಳೂ ಕರ್ನಾಟಕದಲ್ಲಿ ಇವೆ ಎಂದರೆ ಆಶ್ಚರ್ಯವಾಗುವುದು ಸಹಜ. ಈ ಶಾಲೆಯಲ್ಲಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಇದೆ. ಮುಂದೆ ಯಾವಾಗಲಾದರೂ ನೀವು ಮೈಸೂರಿಗೆ ಬಂದಾಗ ಚಾಮುಂಡಿ ದರ್ಶನದ ಜತೆಗೆ ಮಹಾರಾಜಾ ಶಾಲೆಗೂ ಬಂದು ನೋಡಿಕೊಂಡು ಹೋಗಿ ಎಂದು ಕೋರುತ್ತೇವೆ.

ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭಾಷಣ ಮಾಡಿ ಮಹಾರಾಜರ ಆಳ್ವಕೆಯಲ್ಲಿ ಮೈಸೂರು ಪ್ರಾಂತ್ಯದಲ್ಲಿ ನಡೆದ ಶೈಕ್ಷಣಿಕ ಕಾರ್ಯಕ್ರಮಗಳನ್ನು ನೆನೆದರು. ಮೈಸೂರು ಸಾಂಸ್ಕೃತಿಕ ನಗರವಷ್ಟೇ ಅಲ್ಲ, ಶೈಕ್ಷಣಿಕ ನಗರವೂ ಹೌದು ಎಂದು ಮಹಾರಾಜರು ಸಾಬೀತು ಮಾಡಿದವರು ಎಂದು ಗತಕಾಲದ ನೆನಪುಗಳನ್ನು ಕರೆದುಕೊಂಡರು.

ಮಹಾರಾಜಾ ಉಚಿತ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಬೆಳದವರ ಪಟ್ಟಿ ತುಂಬ ದೊಡ್ಡದಿದೆ. ಭಾರತದ ಹೆಸರಾಂತ ವ್ಯಂಗ್ಯಚಿತ್ರಕಾರ ಆರ್ ಕೆ. ಲಕ್ಷಣ್, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್, ಪತ್ರಕರ್ತ ಖಾದ್ರಿ ಶಾಮಣ್ಣ, ಸಮಾಜ ಸೇವಾಕರ್ತ ವೆಂಕಟಕೃಷ್ಣಯ್ಯ ಮುಂತಾದವರಿಗೆ ಇದೇ ಮೊದಲ ಪಾಠಶಾಲೆ. ಒಟ್ಟಾರೆ ಮಹಾರಾಜಾ ಶಾಲೆ ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರೋತ್ತರ ಕರ್ನಾಟಕ ಸಮಾಜಕ್ಕೆ ಒಂದು ಕೊಂಡಿಯಾಗಿ ಉಳಿದು ಬೆಳೆದು ಇತರರನ್ನು ಬೆಳೆಸುವುದರಲ್ಲಿ ಕಾರ್ಯತತ್ಪರವಾಗಿದೆ ಎನ್ನುವ ವಿಚಾರದಲ್ಲಿ ಸಂಶಯವಿಲ್ಲ. [ಮೈಸೂರು ಜಿಲ್ಲಾಸುದ್ದಿ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+