ಜ.30ರಿಂದ ಸುತ್ತೂರು ಜಾತ್ರೆ ಇದೆ ಬನ್ನಿ
ಕಪಿಲ ನದಿ ದಡದಲ್ಲಿ ನೆಲೆನಿಂತಿರುವ ಸುತ್ತೂರು ಕ್ಷೇತ್ರದಲ್ಲಿ ನಡೆಯುವ ಜಾತ್ರೆ ಒಂದು ದಿನದಲ್ಲಿ ಮುಗಿದು ಹೋಗುವ ಜಾತ್ರೆಯಲ್ಲ. ಸುಮಾರು ಆರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಅನ್ನ ದಾಸೋಹ, ಅಕ್ಷರ ದಾಸೋಹ, ಆರೋಗ್ಯ ದಾಸೋಹ, ಆಧ್ಯಾತ್ಮಿಕ ದಾಸೋಹ ಸೇರಿದಂತೆ ವಿಶೇಷ ಪೂಜೆ, ರಥೋತ್ಸವ, ತೆಪ್ಪೋತ್ಸವ, ಸರ್ವ ಧರ್ಮ ಸಮ್ಮೇಳನ, ಸಾಮೂಹಿಕ ವಿವಾಹ, ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿವೆ.
ನೂತನ ಆಸ್ಪತ್ರೆ ಉದ್ಘಾಟನೆ: ಈ ಬಾರಿ ಜ.30 ರಿಂದ ಆರಂಭಗೊಂಡು ಫೆ.4ರವರೆಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಜಾತ್ರೆ ನಡೆಯಲಿದೆ. ಜ.30ರಂದು ಆದಿಜಗದ್ಗುರುಗಳ ಉತ್ಸವಮೂರ್ತಿ ಶೀಮಠದಿಂದ ಕರ್ತೃಗದ್ದುಗೆಗೆ ತರುವ ಮೂಲಕ ಪುಷ್ಯ ಬಹುಳ ದ್ವಾದಶಿ-ತ್ರಯೋದಶಿಯಂದು ಜಾತ್ರೆ ಆರಂಭವಾಗಲಿದೆ.
ಅಲ್ಲದೆ ಅಂದೇ ನೂತನ ಆಸ್ಪತ್ರೆ ಉದ್ಘಾಟನೆ, ಕೃಷಿಮೇಳ, ವಸ್ತುಪ್ರದರ್ಶನ, ಸಾಂಸ್ಕೃತಿಕ ಮೇಳ ಮುಂತಾದ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಗುವುದು. ಜ.31 ರಂದು ಬೆಳ್ಳಿರಥ ಸಮರ್ಪಣೆ, ಸಾಮೂಹಿಕ ವಿವಾಹ, ಕೃಷಿಮೇಳ, ವಿಚಾರಸಂಕಿರಣ, ಭಜನಾಮೇಳ ನಡೆಯಲಿದೆ.
ಫೆ.1 ರಂದು ರಥೋತ್ಸವ, ಸರ್ವಧರ್ಮ ಸಮ್ಮೇಳನ, ವಿಚಾರ ಸಂಕಿರಣ ನಡೆಯಲಿದೆ. ಫೆ.2ರಂದು ನವೀಕೃತ ಜೆಎಸ್ಎಸ್ ವಸ್ತುಸಂಗ್ರಹಾಲಯದ ಉದ್ಘಾಟನೆ, ಗುರುಪರಂಪರೆ ಪ್ರದರ್ಶನ, ಜನಪದ ಪ್ರದರ್ಶನ ನಡೆಯಲಿದ್ದು, ಫೆ.3ರಂದು ಕುಸ್ತಿ ಪಂದ್ಯಾವಳಿ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ. ಫೆ.4 ರಂದು ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಜಾತ್ರೆಯ ವಿವಿಧ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ಸಚಿವರು, ಗಣ್ಯರು ಪಾಲ್ಗೋಳ್ಳಲಿದ್ದಾರೆ. [ಜಾತ್ರೆ]