ಅಧಿಕಾರ ಬಳಸಿ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಿ

ಜನವರಿ 6ರಂದು ನಡೆಯುತ್ತಿರುವ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ರಾಜ್ಯಪಾಲರನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಇಂದು ಭಾರದ್ವಾಜ್ ಅವರನ್ನು ಭೇಟಿ ಮಾಡಿ ಕುಮಾರಸ್ವಾಮಿ ವಿಸ್ತೃತವಾಗಿ ಚರ್ಚೆ ನಡೆಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಬೆಂಗಳೂರಿನ ವಕೀಲರ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರನ್ನು ಆಗ್ರಹಿಸಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲು ರಾಜ್ಯಪಾಲರನ್ನು ಭೇಟಿ ಮಾಡಿದ್ದಾಗಿ ಸುದ್ದಿಗಾರರಿಗೆ ಕುಮಾರಸ್ವಾಮಿ ಚರ್ಚಿಸಿದರು.
ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರ ರಾಜ್ಯಪಾಲರಿಗಿದೆ. ನಾವೀಗ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರುವುದು ಚುನಾವಣೆಯ ದೃಷ್ಟಿಯಿಂದ ಅಲ್ಲ. ಮತದಾರನ ಮನಪರಿವರ್ತನೆಯ ದೃಷ್ಟಿಯಿಂದಲೂ ಅಲ್ಲ. ಆದರೆ, ರಾಜ್ಯದ ಹಿತದೃಷ್ಟಿಯಿಂದ ಬೇಗನೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅವರು ನುಡಿದರು.
ಅಧಿವೇಶನ ಕರೆದಿದ್ದಕ್ಕಾಗಿ ಯಡಿಯೂರಪ್ಪನವರನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ಕಲಾಪ ನಡೆಸುವ ನೈತಿಕತೆ ಯಡಿಯೂರಪ್ಪನವರಿಗೆ ಇಲ್ಲವೇ ಇಲ್ಲ. ದಾಖಲೆಗಳ ಸಮೇತ ಅವರ ಭ್ರಷ್ಟಾಚಾರವನ್ನು ಜನರ ಮುಂದೆ ಇಟ್ಟಿದ್ದರೂ ಏನೂ ಆಗೇ ಇಲ್ಲ ಎಂಬಂತಿದ್ದಾರೆ ಮುಖ್ಯಮಂತ್ರಿ. ದಾಖಲೆ ಸಲ್ಲಿಸಿದ್ದರೂ ದಾಖಲೆ ಕೊಡಿ ಎಂದು ಹಾಸ್ಯಾಸ್ಪದವಾಗಿ ಕೇಳುತ್ತಿದ್ದಾರೆ ಎಂದರು. ರಾಜ್ಯದ ಹಿತದೃಷ್ಟಿಯಿಂದ ಯಡಿಯೂರಪ್ಪನವರು ಕೂಡಲೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.












Click it and Unblock the Notifications