ನೀರಾ ರಾಡಿಯಾ ಡೀಲ್ಗಳಲ್ಲಿ ಅನಂತ್ ಕೈವಾಡ?

ಬಿಜೆಪಿ ನಾಯಕ ಅನಂತ್ ಕುಮಾರ್ ಹಾಗೂ ನೀರಾ ರಾಡಿಯಾ ಜತೆ ಆಪ್ತ ಸಂಬಂಧ ಹೊಂದಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ (1998) ಕೇಂದ್ರ ಸಚಿವರಾಗಿದ್ದ ಬಿಜೆಪಿ ನಾಯಕ ಅನಂತ್ ಕುಮಾರ್, ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗುತ್ತಿದ್ದ ಪ್ರಮುಖ ನಿರ್ಧಾರಗಳ ಕುರಿತು ಲಾಬಿಗಾರ್ತಿ ನೀರಾ ರಾಡಿಯಾಗೆ ಮಾಹಿತಿ ನೀಡುತ್ತಿದ್ದರು ಎಂದು ರಾಡಿಯಾರ ಮಾಜಿ ಪಾಲುದಾರ ರಾವ್ ಧೀರಜ್ ಸಿಂಗ್ ಗಂಭೀರವಾಗಿ ಆರೋಪಿಸಿದ್ದಾರೆ.
ಸಚಿವ ಸಂಪುಟದ ರಹಸ್ಯ ದಾಖಲೆಗಳನ್ನು ರಹಸ್ಯವಾಗಿ ರಾಡಿಯಾಗೆ ಅನಂತಕುಮಾರ್ ರವಾನಿಸುತ್ತಿದ್ದರು ಎಂದಿರುವ ಧೀರಜ್, ರಾಡಿಯಾರನ್ನು ತನ್ನ ಪತ್ನಿ ಎಂದು ತೋರಿಸುವ ಕ್ರೆಡಿಟ್ ಕಾರ್ಡ್ ಸೇರಿದಂತೆ ಇನ್ನಿತರೆ ದಾಖಲೆಗಳನ್ನೂ ಪ್ರದರ್ಶಿಸಿದ್ದಾರೆ. ಆದರೆ ಈ ಆರೋಪಗಳನ್ನು ಅನಂತಕುಮಾರ್ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಧೀರಜ್ ಅವರು ಗುರಗಾಂವ್ನ ಕಾಂಗ್ರೆಸ್ ಸಂಸದರೊಬ್ಬರ ರಕ್ತಸಂಬಂಧಿಯಾಗಿದ್ದು, ಅವರು ಮಾಡುತ್ತಿರುವ ಆರೋಪಗಳು ನಿರಾಧಾರ ಎಂದು ಬಿಜೆಪಿ ಆರೋಪಗಳನ್ನು ತಳ್ಳಿಹಾಕಿದೆ. ಧೀರಜ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅನಂತ್ ಕುಮಾರ್ಗೆ ಬಿಜೆಪಿ ಸೂಚಿಸಿದೆ.
ರಾಡಿಯಾ, ಆಕೆಯ ಸಹೋದರಿ ಕರುಣಾ ಮತ್ತು ನಾನು ಸ್ವಿಸ್ ಬ್ಯಾಂಕ್ ಖಾತೆ ತೆರೆಯಲು ಝುರಿಕ್ಗೆ ಹೋಗಿದ್ದೆವು. ನಾನು ದೆಹಲಿಗೆ ಬಂದ ನಂತರ ಆ ಬ್ಯಾಂಕಿನ ಹೆಸರು ಮತ್ತು ಖಾತೆಯ ನಂಬರ್ ನೀಡುತ್ತೇನೆ ಎಂದಿದ್ದಾರೆ ಧೀರಜ್. ಒಟ್ಟಿನಲ್ಲಿ 2ಜಿ ಸ್ಪೆಕ್ಟ್ರಂ ಹಗರಣ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿರುವುದು ಹೊಸ ಸೋಜಿಗಕ್ಕೆ ಕಾರಣವಾಗಿದೆ.












Click it and Unblock the Notifications