ಹೊಟೇಲು ತಿಂಡಿ ನಂಬಿಕೊಂಡವರಿಗೆ ಭರ್ಜರಿ ಶಾಕ್

ಹಣ್ಣು, ತರಕಾರಿ, ಅನಿಲ, ಹಾಲು, ವಿದ್ಯುತ್, ನೀರು, ಸಾಗಣೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ದರಗಳು ಮಿತಿಮೀರಿರುವ ಹಿನ್ನೆಲೆಯಲ್ಲಿ ಕೂಡಲೆ ಅನ್ವಯವಾಗುವಂತೆ ತಿಂಡಿ ತಿನಿಸುಗಳ ದರವನ್ನು ಏರಿಸಿರುವುದಾಗಿ ಹೊಟೇಲುಗಳ ಸಂಘ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಈ ದರ ಅನ್ವಯವಾಗುವ ಮೊದಲೇ ಜಯನಗರ 3ನೇ ಬ್ಲಾಕ್ ನಲ್ಲಿರುವ ಕಿಕ್ಕಿರಿದು ತುಂಬಿರುವ ಕೆಲ ದರ್ಶಿನಿಗಳು ಊಟಗಳ ದರವನ್ನು ಏರಿಸಿವೆ. ಯಾಕ್ಸಾರ್ ನಿನ್ನೆ ತಾನೆ ಮಿನಿ ಮೀಲ್ಸ್ 18 ರು. ಇದ್ದದ್ದು ಇಂದೇಕೆ 20 ರು. ಎಂದು ಕೇಳಿದ್ದಕ್ಕೆ ತಾತ್ಸಾರವೇ ಹೊಟೇಲಿ ಕ್ಯಾಶಿಯರ್ ನ ಉತ್ತರ. ಗತಿಯಿಲ್ಲದೆ ತುಟ್ಟಿಯಾಗಿರುವ ಈರುಳ್ಳಿಯಿಲ್ಲದ ತಿಳಿತಿಳಿ ಸಾಂಬಾರನ್ನು ಅನ್ನಕ್ಕೆ ಹಚ್ಚಿಕೊಂಡು ತಿನ್ನಬೇಕು.
ಕಾರ್ಮಿಕರ ವೇತನ, ಕಟ್ಟಡದ ಬಾಡಿಗೆ, ನಿರ್ವಹಣೆ ವಚ್ಚಗಳು ಏರಿರುವುದರಿಂದ ತಿಂಡಿ ತೀರ್ಥಗಳು ಬೆಲೆಯನ್ನು ಏರಿಸುವ ಸ್ವಾತಂತ್ರ್ಯವನ್ನು ಆಯಾ ಹೊಟೇಲು ಮಾಲಿಕರಿಗೆ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ವಾಸುದೇವ ಅಡಿಗ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸರಕಾರ ಕೂಡಲೆ ಬೆಲೆ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು, ಹೊಟೇಲನ್ನೇ ನಂಬಿರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದ್ದಾರೆ.
ಈಗಾಗಲೆ ಕೆಲ ದರ್ಶಿನಿಗಳಲ್ಲಿ ಮಸಾಲೆದೋಸೆಯಲ್ಲಿ ಸಂಗಾತಿಯಾಗಿ ಬರುತ್ತಿದ್ದ ಸಾಂಬಾರು ಕಾಣೆಯಾಗಿದೆ. ಬೇಡಿಕೊಂಡರೆ ಮಾತ್ರ ತಿಳಿ ಸಾಂಬಾರು, ಇಲ್ಲದಿದ್ದರೆ ಕಡಲೆಬೇಳೆ ಚಟ್ನಿ, ಆಲೂಗಡ್ಡೆ ಪಲ್ಯವೇ ಗತಿ. ಕೆಲ ಹೊಟೇಲುಗಳ ದರ ಏರಿಸದಿರಲು ನಿಶ್ಚಯಿಸಿದರೆ ಮಸಾಲೆದೋಸೆ, ಬೊಂಡಾ ಸೂಪ್, ಉದ್ದಿನ ವಡೆ, ದಹಿ ವಡೆ, ಪಕೋಡಗಳ ಗಾತ್ರದಲ್ಲಿ ಕುಗ್ಗಿದರೂ ಆಶ್ಚರ್ಯವಿಲ್ಲ.
ಓದುಗರೆ, ಈ ದರ ಏರಿಕೆಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿ.
* ದರ ಏರಿಕೆಗೆ ನಿಮ್ಮ ಸಹಮತವಿದೆಯಾ?
* ದರ ಏರಿಸಿದರೂ ಉತ್ತಮ ಗುಣಮಟ್ಟದ ತಿಂಡಿ ನಿರೀಕ್ಷಿಸುವಿರಾ?
* ಹೊಟೇಲಿನ ಸಹವಾಸವೇ ಬೇಡವೆಂದು ಮನೆಯಿಂದ ಡಬ್ಬಿ ತರುವಿರಾ?
* ಅನ್ಯ ಮಾರ್ಗವೇ ಇಲ್ಲವೆಂದು ಕೇಳಿದ್ದಷ್ಟು ತೆತ್ತು ಬರುವಿರಾ?












Click it and Unblock the Notifications