ಕಟ್ಟಾ ಗತಿ ಸಿಎಂಗೂ ಆಗಲಿದೆಯೇ?
ಸಿಎಂ ವಿರುದ್ಧ ದಾಖಲಾಗಿರುವ ದೂರುಗಳ ಬಗ್ಗೆ ನೀವೇ ತನಿಖೆ ನಡೆಸಿ ಎಂದು ಹೈಕೋರ್ಟ್ ಹೇಳಿದರೆ, 8 ತಿಂಗಳೊಳಗೆ ವಿಚಾರಣೆ ಮುಗಿಸುತ್ತೇನೆ. ಆರೋಪ ಸಾಬೀತಾದರೆ ಅವರಿಗೂ (ಸಿಎಂ ಮತ್ತು ಪುತ್ರರು) ಕಟ್ಟಾ ನಾಯ್ಡು ವಿರುದ್ಧ ಈಗ ಕೈಗೊಂಡಿರುವ ಕ್ರಮವನ್ನೇ ಅನುಸರಿಸಲಾಗುವುದು. ಅಂದರೆ ಎಫ್ಐಆರ್ ದಾಖಲು, ವಿಚಾರಣೆ, ಅಗತ್ಯಬಿದ್ದರೆ ಬಂಧನ, ನ್ಯಾಯಾಲಯಲ್ಲಿ ಆರೋಪಪಟ್ಟಿ ಸಲ್ಲಿಕೆ-ಈ ಎಲ್ಲ ಕ್ರಮಗಳನ್ನೂ ಪಾಲಿಸಲಾಗುವುದು. ಒಬ್ಬರಿಗೆ ಒಂದು, ಮತ್ತೊಬ್ಬರಿಗೆ ಇನ್ನೊಂದು ಎನ್ನುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.
ಭ್ರಷ್ಟಾಚಾರ, ದುರಾಡಳಿತದ ವಿರುದ್ದ ಸಮರ ಸಾರಿರುವ ನ್ಯಾ ಸಂತೋಷ್ ಹೆಗ್ಡೆ, ಈಗ ಕೆಐಎಡಿಬಿ ಅವ್ಯವಹಾರದ ಮೂಟೆಗೆ ಕೈ ಹಾಕಿದ್ದಾರೆ. ತಮ್ಮ ಜನ್ಮ ಜಾಲಾಡಲು ಹೊರಟಿರುವ ಲೋಕಾಯುಕ್ತರಿಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಾಣ ಬೆದರಿಕೆಯನ್ನೂ ಹಾಕಿವೆ ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ಮುನುಗ್ಗಿರುವ ಲೋಕಾಯುಕ್ತರ ಹಠ ಈಗ ಫಲ ನೀಡಿದೆ. ಕಳಂಕಿತ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.