ಪೊನ್ನಂಪೇಟೆಯಲ್ಲಿ ಗುಂಡೇಟಿಗೆ ವ್ಯಕ್ತಿ ಬಲಿ

ಹಳ್ಳಿಗಟ್ಟು ನಿವಾಸಿ ದಿವಂಗತ ಬೆಳ್ಳಿಯಪ್ಪ ಎಂಬುವರ ಪುತ್ರ ಅಡ್ಡಂಡ ಸಚಿನ್ ಎಂಬಾತನೇ ಹಾಡುಹಗಲೇ ಗುಂಡೇಟಿಗೆ ಬಲಿಯಾದವನು. ಈತ ಶುಕ್ರವಾರ ಬೆಳಿಗ್ಗೆ 9.30ರ ವೇಳೆಗೆ ಹಳ್ಳಿಗಟ್ಟಿನ ಅಂಗಡಿ ಮುಂದೆ ಬಂದಿದ್ದನು. ಈ ಸಂದರ್ಭ ಯಾರು ಇಲ್ಲದನ್ನು ಗಮನಿಸಿದ ಹಂತಕರು ಗುಂಡು ಹಾರಿಸಿದ್ದಾರೆ. ಪರಿಣಾಮ ಸಚಿನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆತನನ್ನು ಬಳಿಕ ಎಳೆದೊಯ್ದು ಕಾಫಿತೋಟದೊಳಕ್ಕೆ ಹಾಕಿ ಪರಾರಿಯಾಗಿದ್ದಾರೆ.
ವಿಷಯ ತಿಳಿದ ಮೃತನ ತಾಯಿ ವಾಣಿ ಎಂಬುವರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಪೊನ್ನಂಪೇಟೆ ಎಸ್ಐ ರಾಮರೆಡ್ಡಿ, ಎಸ್ಪಿ ಮಂಜುನಾಥ್ ಅಣ್ಣಿಗೇರಿ, ಡಿವೈಎಸ್ಪಿ ಅಣ್ಣಪ್ಪನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಶ್ವಾನದಳ ಆಗಮಿಸಿತ್ತಾದರೂ ಸಮರ್ಪಕ ಮಾಹಿತಿ ಲಭ್ಯವಾಗಿಲ್ಲ.
ಸುತ್ತಮುತ್ತಲಿನ ಜನರು ಯಾವುದೇ ರೀತಿಯ ಮಾಹಿತಿಯನ್ನು ನೀಡುವಲ್ಲಿ ಹಿಂಜರಿಯುತ್ತಿರುವುದರಿಂದ ಪೊಲೀಸರು ತನಿಖೆಗೆ ತೊಂದರೆಯಾಗಿದೆ ಎನ್ನಲಾಗಿದೆ. ಡಿವೈಎಸ್ಪಿ ಅಣ್ಣಪ್ಪನಾಯಕ್ ಆದೇಶದ ಮೇರೆಗೆ ಆರೋಪಿಯ ಪತ್ತೆಗಾಗಿ 4 ತನಿಖಾ ತಂಡಗಳನ್ನು ರಚಿಸಲಾಗಿದೆ.












Click it and Unblock the Notifications