ಕರ್ನಾಟಕಕ್ಕೆ ಬೇಕಿರುವುದು ಬಿಹಾರ ಮಾದರಿ ಆಡಳಿತ

BS Yeddyurappa
ಕಳೆದ ವಾರವಿಡೀ ಭಾರತೀ ಮಾಧ್ಯಮಗಳಿಗೆ ಬಿಡುವಿಲ್ಲದ ಕೆಲಸ. ಅದರಲ್ಲೂ ಟಿವಿ ಚಾನಲ್ಲುಗಳು ಎಲ್ಲ ಹಗರಣಗಳ ಕುರಿತು ಕಿರುಚಿ, ಅರಚಿ ಕೇಳುಗರ ಕಿವಿಗೆ ತೂತು ಬೀಳುವಂತೆ ಮಾಡಿವೆ. ಅದರಲ್ಲೂ ಕರ್ನಾಟಕದ ಹಗರಣಗಳ ಕುರಿತು ಸುರಿಸಿದ ಸುರಿಮಳೆ ಇನ್ನೂ ಹನಿಯುತ್ತಲೇ ಇದೆ.

ಹಗರಣಗಳ ಸರಮಾಲೆಯನ್ನೇ ಕೊರಳಲ್ಲಿ ಹೊದ್ದಿರುವ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮುಂದುವರಿಯಲು ಇದ್ದ ಏಕೈಕ ಅರ್ಹತೆ ಏನೆಂದರೆ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರದ ಗದ್ದುಗೆಯಲ್ಲಿ ಕುಳ್ಳಿರಿಸಿದ್ದು. ಅಧಿಕಾರ ಮತ್ತೆ ಸಿಕ್ಕಿದೆಯಾದರೂ ಮುಂದಿನ ಹಾದಿ ಸುಗಮವಾಗೇನೂ ಇಲ್ಲ. ಹೆಜ್ಜೆಹೆಜ್ಜೆಗೂ ಚುಚ್ಚುವ ಮುಳ್ಳುಗಳನ್ನು ನಿವಾರಿಸಿಕೊಂಡು ಜನತೆ ಮೆಚ್ಚುವಂತೆ ಆಡಳಿತ ನೀಡಬೇಕಿದೆ.

2008ರಲ್ಲಿ ಮುಖ್ಯಮಂತ್ರಿ ಗಾದಿಯ ಮೇಲೆ ಕೂಡಲು ಹೆಜ್ಜೆ ಇಡುತ್ತಿದ್ದಾಗಲೇ ಮೈತ್ರಿಕೂಟದ ಸಹೋದ್ಯೋಗಿ ಎಚ್ ಡಿ ಕುಮಾರಸ್ವಾಮಿ ಯಡಿಯೂರಪ್ಪ ಅವರ ಕಾಲೆಳೆದಿದ್ದರು. ಇದರಿಂದ ಯಡಿಯೂರಪ್ಪ ಅವರ ಬಗ್ಗೆ ಒಲವು ತೋರಿಸಿದ ಬೆರಳೆಣಿಕೆಯ ಮತದಾರರು ಬಿಜೆಪಿಗೆ ಅಧಿಕಾರದ ಚುಕ್ಕಾಣಿ ಸಿಗುವಂತೆ ಮಾಡಿದ್ದು ಇತಿಹಾಸ. ಭರವಸೆಗಳ ಮಹಾಪೂರವನ್ನೇ ಹರಿಸಿದ್ದ ಯಡಿಯೂರಪ್ಪ ಅತ್ಯಂತ ಶುದ್ಧ ಆಡಳಿತ ನೀಡುವ ಭರವಸೆ ನೀಡಿ, ಬೊಕ್ಕಸದಲ್ಲಿ ಏನೂ ಉಳಿಯದಂತೆ ಎಲ್ಲವನ್ನೂ 'ಸ್ವಚ್ಛ' ಮಡಿದ್ದು ಜನರ ಕಣ್ಣ ಮುಂದೆಯೇ ಇದೆ.

ಬುಧವಾರ, ನವೆಂಬರ್ 24ರಂದು ಯಡಿಯೂರಪ್ಪ ಅಗ್ನಿಪರೀಕ್ಷೆ ಗೆದ್ದು ಕುರ್ಚಿಯನ್ನು ಉಳಿಸಿಕೊಂಡಿದ್ದಾರೆ. ಕಾಲೆಳೆಯುವ ಕಬ್ಬಡ್ಡಿ ಆಟದಲ್ಲಿ ಮೂರನೇ ಬಾರಿಗೆ ವಿರೋಧಿಗಳ ಕೈಗೆ ಸಿಗದಂತೆ ಯಡಿಯೂರಪ್ಪ ನುಣುಚಿಕೊಂಡು ಬಂದಿದ್ದಾರೆ. ನಾವೆಲ್ಲ ಒಟ್ಟಿಗಿದ್ದೇವೆ, ಯಡಿಯೂರಪ್ಪನವರೆ ನಮ್ಮ ನಾಯಕು ಎಂದೆಲ್ಲ ಭಾಷಣ ಬಿಗಿಯುವ ಮೈನಿಂಗ್ ಲಾರ್ಡ್ಸ್ ರೆಡ್ಡಿ ಸಹೋದರರು ಯಡಿಯೂರಪ್ಪನವರನ್ನು ಕುರ್ಚಿಯಿಂದ ಇಳಿಸಲು ಮೊದಲಿಂದಲೂ ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ಯಾವತ್ತೂ ಅಭಿವೃದ್ಧಿ ಜಪಿಸುವ ಯಡಿಯೂರಪ್ಪ ತಮ್ಮ ಹೆಚ್ಚಿನ ಸಮಯವನ್ನೆಲ್ಲ ಅಭಿವೃದ್ಧಿಗಿಂತ ತಮ್ಮ ಕುರ್ಚಿ ಕಾಪಾಡಿಕೊಳ್ಳುವುದರಲ್ಲಿಯೇ ಕಳೆದಿದ್ದಾರೆ ಎಂಬುದು ಸತ್ಯಕ್ಕೆ ಹತ್ತಿರವಾದ ಮಾತು.

ಇದು ಭ್ರಷ್ಟಾಚಾರದ ಹಾರವನ್ನೇ ಹಾಕಿಕೊಂಡಿರುವ ನಮ್ಮ ಕರ್ನಾಟಕದ ಮುಖ್ಯಮಂತ್ರಿಯ ಕಥೆಯಾದರೆ, 'ಮಿ. ಕ್ಲೀನ್' ಎಂದೇ ಖ್ಯಾತಿಗಳಿಸಿರುವ ನಿತೀಶ್ ಕುಮಾರ್ ತಮ್ಮ ವರ್ಚಸ್ಸಿನಿಂದಲೇ ಬಿಹಾರದಲ್ಲಿ ಮತ್ತೊಮ್ಮೆ ಭಾರೀ ಜಯಭೇರಿ ಬಾರಿಸಿದ್ದಾರೆ. ಜಾತಿಯನ್ನು ಹಿಂದಿಕ್ಕಿ, ಅಭಿವೃದ್ಧಿಯ ಪಥವನ್ನು ಮೆಚ್ಚಿದ ಬಿಹಾರದ ಮತದಾರರು ನಿತೀಶ್ ಗೆ ಗೆಲುವಿನ ಹಾರ ಹಾಕಿದ್ದಾರೆ.

ಇದಕ್ಕೂ ಮೊದಲು ನಗೆಪಾಟಲಿಗೆ ಗುರಿಯಾಗಿದ್ದ ಬಿಹಾರದ ರಾಜಕೀಯದತ್ತ ದೇಶದ ಜನತೆ ಹೆಮ್ಮೆಯಿಂದ ನೋಡುತ್ತಿದ್ದಾರೆ. ಅತ್ಯಂತ ಶಾಂತಿಯುತವಾಗಿ ನಡೆದ ಮತದಾನದ ಪ್ರಕ್ರಿಯೆ ಇಡೀ ದೇಶಕ್ಕೆ ಪಾಠ ಕಲಿಸಿದೆ. ವಿದ್ಯುತ್ ಮತ್ತು ನೀರಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ದಾರಿಯಲ್ಲಿ ಇನ್ನೂ ದೂರ ಸಾಗಬೇಕಿದ್ದರೂ ನಿತೀಶ್ ಕುಮಾರ್ ಬಿಹಾರವನ್ನು ಮತ್ತೂ ಕೆಳಕ್ಕೆ ಹೋಗುವುದರಿಂದ ಪಾರು ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಶಭಾಶ್ ಗಿರಿ ನೀಡಲೇಬೇಕು.

ಮತ್ತೆ ಕರ್ನಾಟಕದ ರಾಜಕೀಯಕ್ಕೇ ಬರೋಣ. ಹಲ್ಲಿಲ್ಲದ ಬಿಜೆಪಿ ಹೈಕಮಾಂಡ್ ನಿಂದ ಕೆಲ ಷರತ್ತುಗಳನ್ನು ವಿಧಿಸಿಕೊಂಡು ಜೀವದಾನ ಪಡೆದಿರುವ ಯಡಿಯೂರಪ್ಪ ನಿಜವಾದ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದಾರೆ. ಕನಿಷ್ಠ ಈ ಭರವಸೆಯಾದರೂ ಸುಳ್ಳಾಗದಿರಲಿ ಎಂದು ಕರ್ನಾಟಕದ ಜನತೆ ಹಾರೈಸುತ್ತಿದ್ದಾರೆ. ಮುಖ್ಯಮಂತ್ರಿಗಳು ಬೆಂಗಳೂರನ್ನೊಮ್ಮೆ ಸುತ್ತು ಹೊಡೆದು ಬರಬೇಕು. ಇಲ್ಲಿಯ ರಸ್ತೆಗಳ ಸ್ಥಿತಿ ನೋಡಿದರೆ ಬೆಂಗಳೂರನ್ನು 'ಸಿಲಿಕಾನ್ ವ್ಯಾಲಿ' ಎಂದು ಕರೆಯುವುದು ನಿಜಕ್ಕೂ ಅವಮಾನಕರ. ಇನ್ನೂ ಜಾಗತಿಕ ಹೂಡಿಕೆದಾರರ ಒಪ್ಪಂದಗಳ ಕುರಿತು ಸದ್ಯಕ್ಕೆ ಮಾತನಾಡುವುದು ವ್ಯರ್ಥ.

ಮುಖ್ಯಮಂತ್ರಿಗಳೆ, ಗುಜರಾತ್ ದಲ್ಲಿ ನರೇಂದ್ರ ಮೋದಿ ಮತ್ತು ಬಿಹಾರದಲ್ಲಿ ನಿತೀಶ್ ಕುಮಾರ್ ಯಾವ ರೀತಿ ಆಡಳಿತ ನೀಡಿದ್ದಾರೆಂದು ಒಮ್ಮೆ ಗಹನವಾಗಿ ಗಮನಿಸಿ. ಬಿಹಾರದಲ್ಲಿ ಉತ್ತಮ ಆಡಳಿತ ನೀಡುವುದು ಸಾಧ್ಯವಾದರೆ, ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ? ಎಲ್ಲ ಹಗರಣಗಳ ಲೆಕ್ಕಾಚಾರವನ್ನೊಮ್ಮೆ ಗಮನಿಸಿದರೆ ನಿಮ್ಮಲ್ಲಿ ಸಂಪತ್ತಿಗೇನೂ ಕೊರತೆಯಿಲ್ಲ ಎಂಬುದು ಸರ್ವವಿದಿತ. ಈಗ ಯಾವುದೇ ಸ್ವಾರ್ಥವಿಲ್ಲದ ಆಡಳಿತ ನೀಡುವಿರಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+