ಕೃಷ್ಣಾವತಾರಕ್ಕೆ ಪೇಜಾವರರಿಂದ ಎಳ್ಳು ನೀರು: ಗೌಡ
ಧಾರ್ಮಿಕ ಭಾವನೆಯಲ್ಲಿ ನಮಗೂ ನಂಬಿಕೆ ಇದೆ. ನಾವು ದೇವರು, ಮಠ ಮಾನ್ಯತೆಗೆ ಬೆಲೆ ನೀಡುತ್ತೇವೆ. ಸ್ವಾಮೀಜಿಗಳು ನೀಡುವ ಹೇಳಿಕೆ ಮತ್ತು ಇಡುವ ಹೆಜ್ಜೆ ಜನತೆಗೆ ಮಾದರಿಯಾಗಿರಬೇಕೇ ಹೊರತು ಇವರು ರಾಜಕೀಯ ಮಾಡಬಾರದು. ಅಷ್ಟೇ ಅಲ್ಲದೆ, ಪೇಜಾವರ ಶ್ರೀಗಳು ವಕೀಲಗಿರಿ ಮಾಡಕ್ಕೆ ಹೊರಟಿದ್ದು ಕಳಂಕಿತ ಮುಖ್ಯಮಂತ್ರಿಯ ಮೇಲೆ. ಪೇಜಾವರ ಶ್ರೀಗಳ ಈ ನಡೆಗೆ ನಮ್ಮ ವಿರೋಧವಿದೆ ಎಂದು ದೇವೇಗೌಡ ಹೇಳಿದ್ದಾರೆ.
ಅಡ್ವಾಣಿ ಭೀಷ್ಮನಂತೆ: ಮಹಾಭಾರತದ ದ್ರೌಪದಿ ವಸ್ತ್ರಾಪಹರಣದ ಸಮಯದಲ್ಲಿ ಭೀಷ್ಮ ಪಿತಾಮಹ ತುಂಬಿದ ಸಭೆಯಲ್ಲಿ ಅಸಾಹಯಕನಾಗಿ ಕೂರುತ್ತಾರೆ. ಯಡಿಯೂರಪ್ಪ ವಿಷಯದಲ್ಲಿ ಬಿಜೆಪಿ ಹಿರಿಯ ಧುರೀಣ ಆಡ್ವಾಣಿ ಅವರ ಪರಿಸ್ಥಿತಿ ಹಾಗೇ ಆಗಿದೆ. ಹೈಕಮಾಂಡ್ ಆದೇಶಕ್ಕೆ ತಲೆಬಾಗದ ಮುಖ್ಯಮಂತ್ರಿಯ ತಲೆದಂಡ ಮಾಡದೇ ಇರುವುದು ದುರದೃಷ್ಟಕರ ಎಂದು ದೇವೇಗೌಡ ಲೇವಡಿ ಮಾಡಿದ್ದಾರೆ.
ಸ್ಪೆಕ್ಟ್ರಂ ಹಗರಣದ ವೇಳೆ ಲೋಕಸಭೆಯಲ್ಲಿ ಗದ್ದಲದ ಕಾರಣ ಕಲಾಪ ಮುಂದೂಡಿದಾಗ ನಾನು ಅಲ್ಲೇ ಕೂತಿದ್ದೆ. ನನ್ನ ಸೋದರಿಯಂತಿರುವ ಸುಷ್ಮಾ ಸ್ವರಾಜ್ ಅಚ್ಚ ಕನ್ನಡದಲ್ಲಿ ನಿಮ್ಮ ಆರೋಗ್ಯ ಹೇಗಿದೆ ಎಂದು ವಿಚಾರಿಸುತ್ತಾ ಹತ್ತಿರ ಬಂದರು. ನನ್ನ ಆರೋಗ ಹಾಗಿರಲಿ ನನ್ನ ರಾಜ್ಯದ ಆರೋಗ್ಯ ಹದೆಗೆಡುವ ಮುನ್ನ ಯಡಿಯೂರಪ್ಪ ಅವರನ್ನು ಬದಲಿಸಿ ಎಂದು ಹೇಳಿದ್ದಾಗಿ ದೇವೇಗೌಡ ಹೇಳಿದ್ದಾರೆ.