ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪೃಥ್ವಿರಾಜ್ ಚೌಹಾಣ್
ಆದರ್ಶ್ ಹೌಸಿಂಗ್ ಸೊಸೈಟಿ ಫ್ಲ್ಯಾಟ್ ಹಗರಣದಲ್ಲಿ ಸಿಲುಕಿದ್ದ ಅಶೋಕ್ ಚವಾಣ್ ಅವರು ಸಿಎಂ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದರು. ತಮ್ಮ ಅತ್ತೆ ಹಾಗೂ ಇಬ್ಬರು ಸಂಬಂಧಿಕರಿಗೆ ಆದರ್ಶ ಸೊಸೈಟಿ ಫ್ಲ್ಯಾಟ್ ಗಳನ್ನು ಕೊಡಿಸಿರುವ ಹಗರಣ ಬೆಳಕಿಗೆ ಬಂದ ನಂತರ, ಮಹಾ ಸಿಎಂ ತಲೆದಂಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ, ಒಬಾಮಾ ಅವರ ಭಾರತ ಪ್ರವಾಸದ ಹಿನ್ನೆಲೆಯಲ್ಲಿ ಅಶೋಕ್ ಚವಾಣ್ ಅವರ ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ತಡವಾಗಿತ್ತು.
ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ 31 ಮಹಡಿಯ ಆದರ್ಶ್ ಸೊಸೈಟಿ ಫ್ಲ್ಯಾಟ್ ಗಳನ್ನು ಕಾರ್ಗಿಲ್ ಸಮರದ ಹೀರೋಗಳು ಹಾಗೂ ಮೃತ ಯೋಧರ ಪತ್ನಿಯರಿಗೆ ನೀಡುವ ಸಲುವಾಗಿ ನಿರ್ಮಿಸಲಾಗಿತ್ತು, ಆದರೆ, ಇದನ್ನು ರಾಜಕಾರಣಿಗಳು ಹಾಗೂ ಅವರ ಸಂಬಂಧಿಗಳು, ನಿವೃತ್ತ ಸೇನಾಧಿಕಾರಿಗಳು ಬಳಸುತ್ತಿದ್ದರು. ಇದರಿಂದ ವಿವಾದ ಹುಟ್ಟಿಕೊಂಡಿತ್ತು.
ಸೇನೆಯ ಹಿರಿಯ ಅಧಿಕಾರಿಗಳಾದ ಎನ್ ಸಿ ವಿಜ್, ದೀಪಕ್ ಕಪೂರ್, ಮಾಧವೇಂದ್ರ ಸಿಂಗ್, ರಾಜಕಾರಣಿ ಶರದ್ ಪವಾರ್ ಸೇರಿದಂತೆ ಸುಮಾರು 103ಕ್ಕೂ ಅಧಿಕ ಗಣ್ಯರ ಹೆಸರು ಈ ಹಗರಣದಲ್ಲಿ ಸಿಲುಕಿಕೊಂಡಿದೆ. ಇಲ್ಲಿ ಫ್ಲ್ಯಾಟ್ ಹೊಂದಿದ್ದ ಸೇನೆಯ ನಿವೃತ್ತ ಅಧಿಕಾರಿಗಳು, ಕಾರ್ಗಿಲ್ ಹುತಾತ್ಮರ ಕುಟುಂಬಗಳಿಗೆ ಮರಳಿಸಿದ್ದಾರೆ. ಈ ನಡುವೆ ಫ್ಲ್ಯಾಟ್ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ.