ಹಾಸನಾಂಬೆ ಕೃಪೆ ಇದ್ದರೆ ಸಚಿವನಾಗುವೆ: ರವಿ

ದೇವಾಲಯದ ಜೀರ್ಣೋದ್ಧಾರ ಕಾರ್ಯ ವಿಳಂಬ, ದರ್ಶನಕ್ಕೆ ಟಿಕೆಟ್ ವಿವಾದಗಳ ನಡುವೆ ಕಳೆದ 10 ದಿನಗಳಲ್ಲಿ ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತಾದಿಗಳು ದೇವಿಯ ದರ್ಶನ ಪಡೆದು ಪುನೀತರಾದರು. ಅಂತಿಮ ಕ್ಷಣಗಳಲ್ಲಿ ದರ್ಶನ ಭಾಗ್ಯ ಪಡೆದವರಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕೆ.ಎಸ್. ಈಶ್ವರಪ್ಪ, ವಿ. ಸೋಮಣ್ಣ(ಜಿಲ್ಲಾ ಉಸ್ತುವಾರಿ ಸಚಿವ), ರೇಣುಕಾಚಾರ್ಯ, ಎಚ್ ಡಿ ರೇವಣ್ಣ, ಸಿ.ಟಿ ರವಿ ಪ್ರಮುಖರು.
ಪ್ರತಿ ನಿತ್ಯ ಬೆಳಗ್ಗೆ 6 ರಿಂದ ಸಂಜೆವರೆಗೂ ದೇಗುಲದ ಬಾಗಿಲು ತೆರೆದಿಡಲಾಗಿತ್ತು. ಬಲಿಪಾಡ್ಯಮಿ ದಿನದಂದು ಮಧ್ಯರಾತ್ರಿಯವರೆಗೂ ಭಕ್ತಾದಿಗಳು ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ಅಂತಿಮ ದಿನವಾದ ಇಂದು ಮಧ್ಯಾಹ್ನ 12.30 ರಿಂದ 1.30 ರವರೆಗೆ ವಿಶ್ವರೂಪ ದರ್ಶನ, ಆಭರಣ ವಿಸರ್ಜನೆ ಮುಂತಾದ ಧಾರ್ಮಿಕ ವಿಧಿ ವಿಧಾನಗಳ ಬಳಿಕ ದೇಗುಲದ ಬಾಗಿಲನ್ನು ಮುಚ್ಚಲಾಯಿತು.
ರವಿ ಸಚಿವ ಸ್ಥಾನದ ಆಕಾಂಕ್ಷೆ: ತಾಯಿ ಹಾಸನಾಂಬೆಯ ಕೃಪೆಯಿಂದ ಹಾಗೂ ನನ್ನ ನಿಷ್ಠೆಯನ್ನು ವರಿಷ್ಠರು ಗಮನಿಸಿ ಸಚಿವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸವನ್ನು ಬಿಜೆಪಿ ಶಾಸಕ ಸಿ.ಟಿ ರವಿ ವ್ಯಕ್ತಪಡಿಸಿದರು. ರಾಜ್ಯ ಸಚಿವ ಸಂಪುಟಕ್ಕೆ ನಾನು ಸೇರ್ಪಡೆಯಾಗಲು ಯಾರೂ ಅಡ್ಡಗಾಲು ಹಾಕುತ್ತಿಲ್ಲ ಆದರೆ, ಸಚಿವ ಸ್ಥಾನ ದೊರೆಯದಿದ್ದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಕೆಲಸದಲ್ಲಿ ನಿರತನಾಗುವೆ ಎಂದರು.
ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಾಚಾರ ಭೂತಕ್ಕೆ ವಿಪಕ್ಷಗಳೇ ಕಾರಣ. ವಿನಾಕಾರಣ ಬಿಜೆಪಿಯನ್ನು ದೂರುವುದನ್ನು ವಿಪಕ್ಷಗಳೂ ನಿಲ್ಲಿಸಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದರು.












Click it and Unblock the Notifications