ಕೆಆರ್ಎಸ್ ನಿಂದ ತಮಿಳುನಾಡಿಗೆ ನೀರು ಬಿಡುಗಡೆ
ಗರಿಷ್ಠ 124.80 ಅಡಿ ನೀರು ಶೇಖರಣೆ ಸಾಮರ್ಥ್ಯದ ಜಲಾಶಯದಲ್ಲಿ ನೀರಿನ ಮಟ್ಟವನ್ನು 124.60 ಅಡಿಗೆ ನಿಲ್ಲಿಸಲಾಗಿದೆ. ಗುರುವಾರ ಬೆಳಗ್ಗೆ ಜಲಾಶಯಕ್ಕೆ 19.191 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಜಲಾಶಯದಿಂದ 24.550 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿತ್ತು. ಮಧ್ಯಾಹ್ನ ವೇಳೆಗೆ ಜಲಾಶಯದ ಒಳ ಹರಿವಿನ ಪ್ರಮಾಣವು 23.959 ಕ್ಯೂಸೆಕ್ಗೆ ಹೆಚ್ಚಿದ ಹಿನ್ನೆಲೆಯಲ್ಲಿ ಹೊರ ಹರಿವಿನ ಪ್ರಮಾಣವನ್ನು 31.645 ಕ್ಯೂಸೆಕ್ಗೆ ಏರಿಸಲಾಯಿತು.
ರಂಗನತಿಟ್ಟು ಜಲಾವೃತ : ಕಾವೇರಿ ನದಿಯಲ್ಲಿ ನೀರು ಹರಿವಿನ ಪ್ರಮಾಣ ಹೆಚ್ಚಿದ್ದರಿಂದ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಗುರುವಾರದ ಮಟ್ಟಿಗೆ ದೋಣಿ ವಿಹಾರವನ್ನು ರದ್ದುಪಡಿಸಲಾಗಿತ್ತು ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಾವೇರಿ ವಿವಾದವನ್ನು ತಮ್ಮ ಸರಕಾರ ಕಾನೂನುಬದ್ಧವಾಗಿ ಎದುರಿಸಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಗುರುವಾರ ಹೇಳಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ಸರಕಾರ ಬುಧವಾರ ಹೇಳಿದ ಬೆನ್ನಿಗೆ ಈ ಹೇಳಿಕೆ ನೀಡಿರುವ ಕರುಣಾನಿಧಿ, ಈ ಕಾನೂನು ಹೋರಾಟ ಉಭಯ ರಾಜ್ಯಗಳ ನಡುವಿನ ಬಾಂಧವ್ಯಕ್ಕೆ ಅಡ್ಡಿಯಾಗದು ಎಂದು ಪ್ರತಿಪಾದಿಸಿದ್ದಾರೆ.