ಅಪಘಾತ ರಹಿತ ರೈಲು ಸಂಚಾರ ವ್ಯವಸ್ಥೆ ಜಾರಿ : ಮಮತಾ
ವಿತ್ತ ಪತ್ರಿಕಾ ಸಂಪಾದಕರ ಸಮಾವೇಶದಲ್ಲಿ ಬುಧವಾರ ಮಾತನಾಡುತ್ತಿದ್ದ ಅವರು, ಇದಕ್ಕಾಗಿ ಸೂಕ್ತ ರೈಲ್ವೆ ಸುರಕ್ಷಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದರು. ವಿಶ್ವದ 2ನೇ ಅತಿದೊಡ್ಡ ಸಂಚಾರ ವ್ಯವಸ್ಥೆ ಹಾಗೂ ದೇಶದ ಜೀವನಾಡಿ ಎನಿಸಿರುವ ಭಾರತೀಯ ರೈಲ್ವೆಯ ಸುಧಾರಣೆಗೆ ಹಲವು ದಿಟ್ಟ, ನವೀನ ಹಾಗೂ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಅವರು ತಿಳಿಸಿದರು.
ದೇಶದ ರೈಲ್ವೆ ವ್ಯವಸ್ಥೆಯ ಸುಧಾರಣೆಗೆ ಭಾರಿ ಮೊತ್ತದ ಹಣಕಾಸಿನ ಅಗತ್ಯವಿದ್ದು, ಕೇವಲ ಸರಕಾರವೊಂದರಿಂದಲೇ ಇದು ಸಾಧ್ಯವಿಲ್ಲ. ಇದಕ್ಕೆ ಖಾಸಗಿ ಸಹಭಾಗಿತ್ವದ ಅವಶ್ಯಕತೆಯಿದೆ ಎಂದು ಹೇಳಿದ ಸಚಿವೆ, ಹಣ ಹೂಡಿಕೆಗೆ ಮುಂದಾಗುವಂತೆ ಉದ್ಯಮಿಗಳಿಗೆ ಕರೆ ನೀಡಿದರು. ಸದ್ಯದಲ್ಲೇ ಉದ್ಯಮಿಗಳ ಸಭೆಯೊಂದನ್ನು ಕರೆದು, ರೈಲ್ವೆಯಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಚರ್ಚೆ ನಡೆಸುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದರು.
ಅಗತ್ಯವಿರುವ ಎಲ್ಲ ಮೂಲ ಪರಿಕರಗಳು ರೈಲ್ವೆ ಯಲ್ಲಿ ಲಭ್ಯವಿದ್ದು, ಅವುಗಳ ಬಳಕೆಗೆ ಮುಂದಾಗುವಂತೆ ಕರೆ ನೀಡಿದ ಮಮತಾ, 'ಹಣ ಹೂಡಿ, ಅನಂತರ ಅದರಿಂದ ಬರುವ ಲಾಭದಲ್ಲಿ ಪಾಲು ಪಡೆಯಿರಿ" ಎಂದರು. ರೈಲ್ವೆ ಬೋಗಿ, ಎಂಜಿನ್, ವ್ಯಾಗನ್, ಬಿಡಿ ಭಾಗಗಳು- ಹೀಗೆ ಇಂಥ ಅಗತ್ಯ ಪರಿಕರಗಳ ಉತ್ಪಾದನಾ ಕೇಂದ್ರಗಳನ್ನು ಸಚಿವಾಲಯ ಆರಂಭಿಸು ತ್ತಿದ್ದು, ಇವುಗಳಲ್ಲಿ ಹಣ ಹೂಡುವ ಅವಕಾಶ ಇದೆ ಎಂದರು.
ಆರ್ಥಿಕ ಹಿಂಜರಿತ, ಕಾನೂನು ಸಮಸ್ಯೆ, ನಿರ್ವಹಣಾ ವೆಚ್ಚ ಹೆಚ್ಚಳದಂತಹ ಅನೇಕ ಸಮಸ್ಯೆ ಗಳನ್ನು ಭಾರತೀಯ ರೈಲ್ವೆ ಎದುರಿಸುತ್ತಿದ್ದರೂ, ಅದನ್ನು ಮೆಟ್ಟಿ ನಿಂತು ಸಾಕಷ್ಟು ಸುಧಾರಣೆ ತರುವಲ್ಲಿ ಯಶಸ್ವಿಯಾಗಿದೆ. ಇದೆ ಮಧ್ಯೆಯೂ ಪ್ರಯಾಣ ಹಾಗೂ ಸರಕು ಸಾಗಣೆ ದರ ಹೆಚ್ಚಿಸದಿರುವುದು ನಮ್ಮ ಹೆಗ್ಗಳಿಕೆ ಎಂದರು.