ಅ.28ರಿಂದ 13ನೇ ಬೆಂಗಳೂರು ಐಟಿ ಬಿಜ್
ನಗರದ ಲಲಿತ್ ಅಶೋಕ್ ಹೊಟೇಲ್ನಲ್ಲಿ ನಡೆಯಲಿರುವ ಬೆಂಗಳೂರು ಐಟಿ ಬಿಜ್ - 2010 ವಿಚಾರ ಸಂಕಿರಣವನ್ನು ಕೇಂದ್ರ ಸಚಿವ ಪ್ರಣಬ್ ಮುಖರ್ಜಿ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಹಿತಿ ತಂತ್ರಜ್ಞಾನಇಲಾಖೆ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು, ಕೇಂದ್ರ ಸಚಿವ ಸಚಿನ್ ಪೈಲೆಟ್ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ 'ಕರ್ನಾಟಕ ಐಟಿ ಪಾಲಿಸಿ' ಯನ್ನು ಬಿಡುಗಡೆ ಮಾಡಲಾಗುವುದು ಎಂದು ಅಶೋಕ್ ಮನೋಳಿ ಹೇಳಿದರು.
ಸಂಕಿರಣದಲ್ಲಿ ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಹಾಗೂ ಇಸ್ರೇಲ್, ಚಿಲಿ, ಕೆನಡಾ, ನೆದರ್ಲ್ಯಾಂಡ್, ಜಪಾನ್, ಕೊರಿಯಾ ಮತ್ತಿತರ ವಿದೇಶಗಳ ಕಂಪನಿಗಳು ಭಾಗವಹಿಸಲಿದ್ದಾರೆ ಎಂದು ಆಶೋಕ್ ತಿಳಿಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಈ ವಿಚಾರ ಸಂಕಿರಣದಲ್ಲಿ 125ಕ್ಕೂ ಹೆಚ್ಚು ಉಪನ್ಯಾಸಕರು, ಯೋಗಿಗಳು, 150 ಪ್ರದರ್ಶಕರು, 2,500 ಉದ್ಯಮ ಸಂದರ್ಶಕರು, ದೇಶ-ವಿದೇಶಗಳಿಂದ 700ಕ್ಕೂ ಹೆಚ್ಚು ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ಮನೋಳಿ ಹೇಳಿದರು.
ಹೊಸ ತಂತ್ರಜ್ಞಾನ ಅನಾವರಣ: ಈ ಸಂಕಿರಣ "Billion Strong- Empowered by ICT" ಎಂಬ ಧ್ಯೇಯವಾಕ್ಯದೊಂದಿಗೆ, ಇದೇ ಮೊದಲ ಬಾರಿಗೆ ವೆಬ್ ಆಧಾರಿತ ಪಾಲುದಾರಿಕೆಯ ಉಪಕರಣವಾದ ಇಂಟರ್ ಮಿಕ್ಸನ್ನು ಇದೇ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ಜೊತೆಗೆ ಇ-ಆಡಳಿತ, ಶಕ್ತಿ ಮತ್ತು ಪರಿಸರ, ಎಂಬೆಡೆಡ್ ತಂತ್ರಜ್ಞಾನ, ವಿಐಎಸ್, ವೈಮಾನಿಕ ಮತ್ತು ಅಂತರಿಕ್ಷ ಕ್ಷೇತ್ರ, ಅಣು ಮತ್ತು ರಕ್ಷಣೆ ಅನಿಮೇಷನ್, ವಿಎಫ್ಎಕ್ಸ್, ಗೇಮಿಂಗ್, ಕಾಮಿಕ್ಸ್ ಮತ್ತಿತರ ತಂತ್ರಜ್ಞಾನ ಬಗ್ಗೆ ಕುರಿತಂತೆ ವಿಚಾರ ಸಂಕಿರಣ ನಡೆಯಲಿದೆ.
ಏರ್ಟೆಲ್, ಬಿಇಎಲ್, ಬಿಎಸ್ಎನ್ಎಲ್, ಸಿಸ್ಕೋ, ಡೆಲ್ ಇಂಟಲ್, ಇನ್ಫೋಸಿಸ್, ವಿಫ್ರೋ, ಮೈಕ್ರೋಸಾಫ್ಟ್, ಐಬಿಎಂ, ಹೆಚ್ಪಿ ಮತ್ತಿತರ ಕಂಪನಿಗಳು ಭಾಗವಹಿಸಲಿವೆ ಎಂದು ಮನೋಳಿ ವಿವರಿಸಿದರು.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS