ಯಡ್ಡಿ ಸರಕಾರದ ಹಣೆಬರಹಕ್ಕೆ ಕ್ಷಣಗಣನೆ

ಮುಖ್ಯಮಂತ್ರಿ ಯಡಿಯೂರಪ್ಪ ಬಹುಮತ ಸಾಬೀತುಪಡಿಸಿದ ಬಳಿಕ ರಾಜಕೀಯ ಬೇಗೆ ಮುಗಿಯಿತು ಎಂದು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಸೋತು ಸುಣ್ಣವಾಗಿವೆ ಎನ್ನಲಾಗಿತ್ತು. ಆದರೆ, ಈ ಪಕ್ಷಗಳ ನಾಯಕರು ತೆರೆಮರೆಯಲ್ಲಿ ನಡೆಸುತ್ತಿರುವ ಚಟುವಟಿಕೆ ಗಮನಿಸಿದರೆ, ಬರುವ ದಿನಗಳಲ್ಲಿ ರಾಜಕೀಯ ಚಟುವಟಿಕೆ ಇನ್ನಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ.
ಮೊಯ್ಲಿ ಜತೆ ಮಾತುಕತೆ : ರಾಜ್ಯದ ಜನತೆ ಆಯುಧ ಪೂಜೆ ಮತ್ತು ವಿಜಯದಶಮಿ ಆಚರಣೆಯಲ್ಲಿ ಮಗ್ನರಾಗಿದ್ದರೆ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಸಂಸದ ಕುಮಾರಸ್ವಾಮಿ ವಿಶ್ರಮಿಸಲಿಲ್ಲ. ಪರ್ಯಾಯ ಸರಕಾರ ರಚನೆಯಲ್ಲಿ ಸೋತಿದ್ದರೂ, ಪ್ರಯತ್ನ ಕೈಬಿಟ್ಟಿಲ್ಲ ಎನ್ನುವಂತೆ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ನಿವಾಸಕ್ಕೆ ಶನಿವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಯಡಿಯೂರಪ್ಪ ಸರಕಾರ ಉರುಳದಂತೆ ತಡೆಯುವಲ್ಲಿ ಮೊಯ್ಲಿ ಕೊಡುಗೆ ಅಪಾರ ಎಂಬ ಮಾತು ಕೇಳಿ ಬಂದಿರುವ ಸಂದರ್ಭದಲ್ಲಿ ನಡೆದಿರುವ ಈ ಭೇಟಿ ಹೆಚ್ಚು ಮಹತ್ವಪಡೆದುಕೊಂಡಿದೆ. ಭಾನುವಾರ ಮುಖ್ಯಮಂತ್ರಿ ಯಡಿಯೂರಪ್ಪ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದರೆ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಮನೆಯಲ್ಲಿ ಭೇಟಿಯಾಗಿ ಮುಂದಿನ ರಾಜಕೀಯ ನಡೆ ಕುರಿತು ಒಂದು ತಾಸಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ಹಾವು-ಮುಂಗುಸಿಯಂತಿದ್ದ ಸಿದ್ದು-ಕುಮಾರಸ್ವಾಮಿ ಪದೇಪದೆ ಭೇಟಿ ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.












Click it and Unblock the Notifications