ನಾಯಕತ್ವ ಚೇಂಜ್ : ಅನಂತ್ ಗೆ ಛಾನ್ಸ್?
ವಿಜಯದಶಮಿ ನಿಮಿತ್ತ ಅನಂತ್ ಕುಮಾರ್ ಅವರು ಬೆಂಗಳೂರಿನ ಶಾಸಕರು, ವಿಧಾನಪರಿಷತ್ ಸದಸ್ಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಬಗ್ಗೆ ಅವರು ಸಮಾಲೋಚಿಸಿದರು. ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರ ಇತ್ತೀಚೆಗೆ ಭ್ರಷ್ಟಾಚಾರ ಹಾಗೂ ಹಗರಣಗಳಿಂದ ಹೆಸರು ಕೆಡಿಸಿಕೊಂಡಿದೆ. ಸ್ಥಿರತೆ ಹೆಸರಿನಲ್ಲಿ ಆಪರೇಷನ್ ಕಮಲ, ಆ ಮೂಲಕ ಪಕ್ಷಕ್ಕೆ ಬಂದವರಿಗೆ ಅಧಿಕಾರ ದೀಕ್ಷೆ, ಪಕ್ಷದ ನಿಷ್ಠರಿಗೆ ಅಧಿಕಾರ ಸಿಗದೆ ವಂಚನೆ ಮುಂತಾದ ವಿಷಯಗಳನ್ನು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಜಯದಶಮಿ ನಿಮಿತ್ತ ಅನಂತ್ ಪ್ರತಿವರ್ಷ ನಗರದ ಶಾಸಕರಿಗೆ ಔತಣಕೂಟ ಏರ್ಪಡಿಸುತ್ತಾರೆ. ಆದರೆ, ಇಂದಿನ ಕೂಟದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಜನಾರ್ದನರೆಡ್ಡಿ, ಬಚ್ಚೇಗೌಡ, ನಾರಾಯಣಸ್ವಾಮಿ, ಸಂಸದರಾದ ರಾಜೀವ ಚಂದ್ರಶೇಖರ್, ಮೋಹನ್, ಚಂದ್ರೇಗೌಡ, ಎಂಎಲ್ಸಿ ವಿಮಲಾಗೌಡ, ಶಾಸಕ ಸುನೀಲ್ ವಲ್ಯಾಪುರೆ ಮತ್ತಿತರರು ಭಾಗವಹಿಸಿದ್ದು ಅಚ್ಚರಿಗೆ ಕಾರಣವಾಗಿದೆ.
ಯಡಿಯೂರಪ್ಪ ನಾಯಕತ್ವದ ವಿರುದ್ಧ ಬಂಡಾಯ ಬಾವುಟ ಹಾರಿಸಿ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಬಿಜೆಪಿಯ 11 ಶಾಸಕರ ಒತ್ತಾಯವೂ ನಾಯಕತ್ವ ಬದಲಾವಣೆಯೇ ಆಗಿತ್ತು. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ಬೆಳವಣಿಗೆಗಳು ಮತ್ತೆ ನಡೆಯಬಾರದು ಎಂಬುದು ಹೈಕಮಾಂಡ್ ಯೋಚನೆಯಾಗಿದೆ. ಈ ಹಿಂದೆ ನಾಯಕತ್ವ ಬದಲಾಯಿಸಬೇಕು ಎಂದು ಪಟ್ಟುಹಿಡಿದಿದ್ದ ರೆಡ್ಡಿಗಳು ಇದೀಗ ಮತ್ತೆ ಅಖಾಡಕ್ಕೆ ಇಳಿದಿರುವುದರಿಂದ ಚಿಂತನೆ ಉಲ್ಭಣಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7