ಶಂಕರಲಿಂಗೇ ಗೌಡರಿಂದ ಬಿಜೆಪಿ ಮಾನ ಬೀದಿಯಲ್ಲಿ ಹರಾಜು
ಸಂಪುಟದಲ್ಲಿ ಹೊಸದಾಗಿ ಸೇರ್ಪಡಿಯಾಗಿರುವ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ವಹಿಸಿರುವ ಎಸ್ಎ ರಾಮದಾಸ್ ಅವರು ಮೈಸೂರಿನಲ್ಲಿ ಶಂಕರಲಿಂಗೇ ಗೌಡ ಅವರನ್ನು ಭೇಟಿ ಮಾಡಲು ಹೋದಾಗ, ಯಡಿಯೂರಪ್ಪನವರನ್ನು ವಾಚಾಮಗೋಚರವಾಗಿ ನಿಂದಿಸಿದ್ದಾರೆ.
ಶಂಕರಲಿಂಗೇ ಗೌಡ ಅವರು ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆಯಲ್ಲಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಅವರಿಗೆ ಸ್ಥಾನ ನೀಡದೆ ಯಡಿಯೂರಪ್ಪನವರು ಕೆಲ ಹೊಸಬರಿಗೆ ಮಣೆ ಹಾಕಿದ್ದರು. ಇದು ಶಂಕರಲಿಂಗೇಗೌಡರ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಆಕ್ರೋಶ ಇಂದು ಜ್ವಾಲಾಮುಖಿಯಾಗಿ ಉಕ್ಕಿಹರಿದಿದೆ, ಅದೂ ಬೀದಿಯಲ್ಲಿ.
ಎರಡು ನಿಮಿಷ ಶಿಷ್ಟಾಚಾರದ ಮಾತನಾಡಿದ ಗೌಡರು ರಾಮದಾಸ್ ಅವರು ಮನೆಯಲ್ಲೇ ಇದ್ದಾಗ ಬೀದಿಗೆ ಬಂದು ತಮ್ಮ ಎಂದಿನ ವಾಗ್ದಾಳಿ ಶುರು ಹಚ್ಚಿಕೊಂಡರು. ಸರಕಾರದಲ್ಲಿ ಲಂಚಕೋರರಿಗೆ, ಕಳ್ಳರಿಗೆ ಮತ್ತು ಸುಳ್ಳರಿಗೆ ಅವಕಾಶ ನೀಡಲಾಗಿದೆ. ಆದರೆ, ಪ್ರಾಮಾಣಿಕರಿಗೆ ಮತ್ತು ಹಿರಿಯರನ್ನು ಕಡೆಗಣಿಸಲಾಗಿದೆ. ಯಡಿಯೂರಪ್ಪನವರೇ ತಮ್ಮ ತಲೆ ಮೇಲೆ ಚಪ್ಪಡಿ ಕಲ್ಲನ್ನು ಎಳೆದಿದ್ದಾರೆ. ಈ ಬಾರಿ ಮೈಸೂರು ದಸರಾ ಕಾರ್ಯಕ್ರಮದಲ್ಲಿಯೂ ಭಾಗವಹಿಸುವುದಿಲ್ಲ ಎಂದು ಸಾರ್ವಜನಿಕರೆದುರೇ ಸಹಸ್ರನಾಮಾವಳಿ ಪ್ರಾರಂಭಿಸಿದರು.