ಗೌರಿಗಣೇಶ ಹಬ್ಬ : ವಂತಿಕೆ ಸಂಗ್ರಹಿಸಿದರೆ ಕ್ರಮ
ಗೌರಿ-ಗಣೇಶ ಹಬ್ಬದ ಅಂಗವಾಗಿ ಮೂರ್ತಿ ಪ್ರತಿಷ್ಠಾಪನೆಗೆ ಮಾಡುವವರಿಗೆ ಬಿದರಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಜನನಿಬಿಡ ಪ್ರದೇಶ ಹಾಗೂ ರಸ್ತೆಗಳಲ್ಲಿ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶವಿಲ್ಲ. ಗಣೇಶ ಮೂರ್ತಿ ಸ್ಥಾಪಿಸಲು ಸಾರ್ವಜನಿಕರಿಗೆ ತೊಂದರೆಯಾಗದಂತಹ ಸ್ಥಳವನ್ನು ನಿಗದಿಪಡಿಸುವಂತೆ ಅವರು ಸೂಚಿಸಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆ, ಬೆಸ್ಕಾಂ, ಅಗ್ನಿ ಶಾಮಕ ದಳ ಹಾಗೂ ಸಂಚಾರಿ ಪೊಲೀಸರಿಂದ ನಿರಾಕ್ಷೇಪಣಾ (NOC) ಪತ್ರದೊಂದಿಗೆ ಗಣೇಶ ಮೂರ್ತಿಯನ್ನು ಯಾವ ದಿನಾಂಕದಂದು ಎಷ್ಟು ಗಂಟೆಗೆ ಯಾವ ಸ್ಥಳದಲ್ಲಿ ವಿಸರ್ಜಿಸಲಾಗುವುದು. ಅಲ್ಲದೆ, ಗಣೇಶ ಮೂರ್ತಿಯನ್ನು ಸಾಗಿಸುವ ಮಾರ್ಗದ ವಿವರಗಳನ್ನೊಳಗೊಂಡ ಅರ್ಜಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸಲ್ಲಿಸಿ, ಠಾಣಾಧಿಕಾರಿಯವರ ಅಭಿಪ್ರಾಯ ವರದಿಯನ್ನು ಸಂಬಂಧಪಟ್ಟ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಪರಿಶೀಲಿಸಿ ಪರವಾನಗಿ ನೀಡಲು ಕ್ರಮಕೈಗೊಳ್ಳುವರು ಎಂದು ತಿಳಿಸಿದ್ದಾರೆ.
ಪರವಾನಗಿ ನೀಡುವಾಗ ವಿಶೇಷವಾಗಿ ಮೆರವಣಿಗೆಯ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಕಾಲಕಾಲಕ್ಕೆ ನೀಡುವ ಎಲ್ಲ ಸೂಚನೆಗಳನ್ನು ತಪ್ಪದೆ ಪಾಲಿಸುವಂತೆ ನಿಬಂಧನೆಯೊಂದಿಗೆ ಪರವಾನಗಿ ನೀಡಲಾಗುವುದು. ಧ್ವನಿವರ್ಧಕಗಳನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಉಪಯೋಗಿಸಬೇಕು. ಅಲ್ಲದೆ, ಧ್ವನಿವರ್ಧಕ ಬಳಕೆಯಿಂದ ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಮುತ್ತಲಿನ ಹಿರಿಯ ನಾಗರಿಕರಿಗೆ, ಶಾಲಾ ಮಕ್ಕಳಿಗೆ ಹಾಗೂ ಆಸ್ಪತ್ರೆಯ ರೋಗಿಗಳಿಗೆ ತೊಂದರೆಯಾಗದಂತೆ ಬಳಸಬೇಕು. ಈ ನಿಬಂಧನೆಯನ್ನು ಪಾಲನೆ ಮಾಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.