ಮೊಬೈಲ್ ಗಾಗಿ ಜಗಳ, ಕೊಲೆಯಲ್ಲಿ ಸಮಾಪ್ತಿ
ದೊರೆಸ್ವಾಮಿಪಾಳ್ಯದ ನಿವಾಸಿ ಕೃಷ್ಣಪ್ರಸಾದ್ (25) ಕೊಲೆಯಾದವನು. ಈತನ ಸ್ನೇಹಿತರೇ ಕಟ್ಟಿಗೆ ತುಂಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿ,ಶವವನ್ನು ಮನೆಯ ಪಕ್ಕದ ಶೌಚಾಲಯ ಬಳಿ ಎಸೆದು ಹೋಗಿದ್ದರು.
ಘಟನೆ ವಿವರ: ಅಸ್ಸಾಂ ಮೂಲದವನಾದ ಕೃಷ್ಣಪ್ರಸಾದ್, ಖಾಸಗಿ ಕಂಪೆನಿಯಲ್ಲಿ ಸೆಕ್ಯೂರಿಟಿ ಗಾರ್ಡ್ಆಗಿದ್ದ. ಅಲ್ಲದೆ, ತನ್ನ ಪರಿಚಯದವರಿಗೆ ಪರಿಚಯದವರನ್ನು ಕರೆ ತಂದು ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡಿಸುತ್ತಲೂ ಇದ್ದ ಸುಮಾರು 10 ಜನ ಸ್ನೇಹಿತರೊಡನೆ ಒಟ್ಟಿಗೆ ದೊರೆಸ್ವಾಮಿ ಪಾಳ್ಯದಲ್ಲಿ ವಾಸವಾಗಿದ್ದ.
ಇವನ ಸ್ನೇಹಿತರಲ್ಲಿ ಒಬ್ಬನಾದ ರಾಮುವಿನ ಮೊಬೈಲ್ ಕಳೆದುಕೊಂಡಿದ್ದ. ತನ್ನ ಸ್ನೇಹಿತರಲ್ಲೇ ಯಾರಾದರು ಕದ್ದಿರಬಹುದು ಎಂಬ ಶಂಕೆಯೊಂದಿಗೆ ಒಬ್ಬೊಬ್ಬರನ್ನು ವಿಚಾರಿಸತೊಡಗಿದ. ಅದೇ ರೀತಿ ಕೃಷ್ಣನನ್ನು ಕೇಳಿದ್ದಾನೆ.
ಇಬ್ಬರಿಗೂ ಮಾತಿಗೆ ಮಾತು ಬೆಳೆದು ದೊಡ್ಡ ಜಗಳ ಆಗಿ, ಗಲಾಟೆ ವಿಕೋಪಕ್ಕೆ ತಿರುಗಿ ಕೃಷ್ಣನ ಕೊಲೆಯಲ್ಲಿ ಅಂತ್ಯ ಕಂಡಿದೆ. ಕೃಷ್ಣನ ತಲೆ , ಮುಖದ ಮೇಲೆ ಕಟ್ಟಿಗೆ ಆಥವಾ ರಾಡ್ ನಿಂದ ಬಲವಾಗಿ ಹೊಡೆದ ಗುರುತುಗಳು ಕಂಡುಬಂದಿವೆ.
ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಇನ್ನಿಬ್ಬರು ಸ್ನೇಹಿತರು ಕೃಷ್ಣನ ಶವವನ್ನು ತೆಗೆದುಕೊಂಡು ಹೋಗಿ ಪಕ್ಕದ ಶೌಚಾಲಯ ಬಳಿ ಹಾಕಿ ವಾಪಸ್ಸು ಮನೆಗೆ ಬಂದಿದ್ದಾರೆ. ಮನೆಯಲ್ಲಿ ಬಿದ್ದಿದ್ದ ರಕ್ತವನ್ನು ಸ್ವಚ್ಛಗೊಳಿಸಿ ಅಲ್ಲಿಯೇ ಮಲಗಿದ್ದಾರೆ. ಭಾನುವಾರ ಬೆಳಿಗ್ಗೆ ಪಕ್ಕದ ಮನೆಯವರು ಶವವನ್ನು ನೋಡಿ ಜೆಪಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಬಂದಾಗ ಆರೋಪಿಗಳು ಮನೆಯಲ್ಲಿಯೇ ಮಲಗಿದ್ದರು. ಪೊಲೀಸರು ಬಂದು ಕೇಳಿದಾಗ ತಮಗೆ ಏನು ತಿಳಿದಿಲ್ಲವೆಂದು ನಾಟಕವಾಡಿದ್ದಾರೆ. ಆದರೆ, ಸಂಶಯಗೊಂಡ ಪೊಲೀಸರು ಮೃತನ ಸ್ನೇಹಿತರನ್ನು ಠಾಣೆಗೆ ಕರೆ ತಂದು ವಿಚಾರಿಸಲಾಗಿ, ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.