ತಿಮ್ಮಪ್ಪನ ಸನ್ನಿಧಿಯಲ್ಲಿ ಹಣ ಗೋವಿಂದ?
ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಪೂಜೆಗಾಗಿ ಮುಂಗಡವಾಗಿ ನೀಡುವ ಟಿಕೆಟ್ ನಲ್ಲಿ(Arjitha Seva) ಭಾರಿ ಭ್ರಷ್ಟಾಚಾರ ನಡೆದಿದೆ ಎನ್ನುವುದು ಒಂದಾದರೆ, ವೆಂಕಟೇಶ್ವರನಿಗೆ ಸೇರಿದ 500 ವರ್ಷಗಳ ಹಿಂದಿನ ಚಿನ್ನಾಭರಣಗಳು ಕಾಣಿಯಾಗಿರುವ ಸಂಗತಿ ಬೆಳಕಿಗೆ ಬಂದಿರುವುದು ಕೋಟ್ಯಂತರ ಭಕ್ತರಲ್ಲಿ ಬೇಸರವನ್ನು ತರಿಸಿದೆ.
ಟಿಟಿಡಿಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ತೆಲುಗು ದೇಶಂ ಪಾರ್ಟಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ತಿರುಪತಿಯ ಶಾಸಕ ಹಾಗೂ ಪ್ರಜಾರಾಜ್ಯಂ ಪಕ್ಷದ ಅಧ್ಯಕ್ಷ ಚಿರಂಜೀವಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣಕಾಸು ಅವ್ಯವಹಾರ ಮತ್ತು ಚಿನ್ನಾಭರಣಗಳ ನಾಪತ್ತೆಯಾಗಿರುವುದು ಕೋಟ್ಯಂತರ ಭಕ್ತಾಧಿಗಳ ನಂಬಿಕೆಗೆ ಕೊಡಲಿ ಏಟು ನೀಡಿದಂತಾಗಿದೆ. ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ ಎಂದು ದೂರಿದ್ದಾರೆ.
ಉದ್ಯಮಿ ಹಾಗೂ ಟಿಟಿಡಿಯ ಅಧ್ಯಕ್ಷ ಡಿ ಕೆ ಆದಿಕೇಶವಲು ಅವರು ಹಣಕಾಸು ಅವ್ಯವಹಾರದಲ್ಲಿ ಪಾಲ್ಗೊಳ್ಳುವ ಮೂಲಕ ಭಕ್ತರ ನಂಬಿಕೆಗೆ ದ್ರೋಹ ಎಸಗಿದ್ದಾರೆ. ಅಲ್ಲದೆ, ಟಿಟಿಡಿಯ ಸದಸ್ಯರ ಆಪ್ತ ಕಾರ್ಯದರ್ಶಿಗಳು ಪ್ರಭಾವ ಬೆಳಸಿ ಪೂಜೆಯ ಮುಂಗಡ ಟಿಕೆಟ್ ಗಳನ್ನು ಪಡೆದುಕೊಂಡು ಭಕ್ತಾಧಿಗಳಿಗೆ ನಿಗದಿತ ಹಣಕ್ಕಿಂತ ಹೆಚ್ಚು ಹಣಕ್ಕೆ ಟಿಕೆಟ್ ಮಾರಾಟ ಮಾಡಿದ್ದಾರೆ. ಸುಮಾರು 50 ಕೋಟಿ ರುಪಾಯಿಗಳ ಅವ್ಯವಹಾರ ಇದಾಗಿದೆ. ಇದು ಸದಸ್ಯರ ಮೂಗಿನ ಕೆಳಗೆ ನಡೆಯುತ್ತಿದೆ ಎಂದು ವಿರೋಧ ಪಕ್ಷಗಳು ಗಂಭೀರ ಆರೋಪ ಮಾಡಿವೆ. ಟಿಟಿಡಿಯ ಹಿಂದಿನ ಅಧ್ಯಕ್ಷ ಕರುಣಾಕರರೆಡ್ಡಿ ಮೇಲಿಯೂ ಭ್ರಷ್ಟಾಚಾರದ ಆರೋಪ ಮಾಡಲಾಗಿದೆ.
ಸಿಬಿಐ ತನಿಖೆಗೆ ವಹಿಸಿ : ಕರುಣಾಕರರೆಡ್ಡಿ
ಭ್ರಷ್ಟಾಚಾರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಟಿಟಿಡಿ ಮಾಜಿ ಅಧ್ಯಕ್ಷ ಬಿ ಕರುಣಾಕರರೆಡ್ಡಿ, ವಿರೋಧ ಪಕ್ಷಗಳು ನನ್ನ ಮೇಲೆ ಮಾಡುತ್ತಿರುವ ಆರೋಪ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಟಿಟಿಡಿ ಅವ್ಯವಹಾರದ ಬಗ್ಗೆ ಸಿಬಿಐ ತನಿಖೆ ಇಲ್ಲವೇ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ರಾಜ್ಯಪಾಲರನ್ನು ಭೇಟಿ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಸರಕಾರ 48ಗಂಟೆಯೊಳಗೆ ಕ್ರಮಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅವರು ಬೆದರಿಕೆ ಹಾಕಿದ್ದಾರೆ. ಟಿಟಿಡಿಯ ಅಧ್ಯಕ್ಷನಾಗಿದ್ದಾಗ ನಾನು ನಿಶ್ವಾರ್ಥದಿಂದ ಕೆಲಸ ಮಾಡಿರುವೆ. ನನ್ನ ಮೇಲೆ ಅವ್ಯವಹಾರದ ಆಪಾದನೆ ಬಂದಿರುವುದು ನೋವು ತಂದಿದೆ ಎಂದು ಕರುಣಾಕರರೆಡ್ಡಿ ಹೇಳಿದ್ದಾರೆ.