ಅಕ್ರಮ ಗಣಿ ತಡೆಗೆ ಉನ್ನತ ಸಮಿತಿ : ಕೇಂದ್ರ
ಕಳೆದ ಹಲವಾರು ತಿಂಗಳಿಂದ ವಿವಿಧ ರಾಜಕೀಯ ಪಕ್ಷಗಳು ಮಾಡುತ್ತಿರುವ ಒತ್ತಾಯ ಪರಿಗಣಿಸಿರುವ ಕೇಂದ್ರ ಸರಕಾರ ಕೊನೆಗೂ ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ಮುಂದಾಗಿದೆ. ಸೋಮವಾರ ನಡೆದ ಪ್ರಧಾನಮಂತ್ರಿಗಳ ಸಚಿವಾಲಯ ಹಾಗೂ ಗಣಿ ಇಲಾಖೆಯೊಂದಿಗಿನ ಸಭೆಯ ನಂತರ ಈ ವಿಷಯ ಹೊರಬಿದ್ದಿದೆ.
ಅಕ್ರಮ ಗಣಿಗಾರಿಕೆ ತಡೆಗೆ ಸಮಿತಿ ರಚಿಸಲಾಗುವುದು. 18 ತಿಂಗಳೊಳಗೆ ಸಮಗ್ರ ವರದಿಯೊಂದನ್ನು ನೀಡುವಂತೆ ಸಮಿತಿಗೆ ಸೂಚಿಸಲಾಗುವುದು ಎಂದು ಸಚಿವಾಲಯ ಹೇಳಿದೆ. ಅಲ್ಲದೇ, ಕರ್ನಾಟಕ ಸೇರಿದಂತೆ ಆಯಾ ರಾಜ್ಯ ಸರಕಾರಗಳು ಕೈಗೊಂಡ ಕ್ರಮಗಳನ್ನು ವರದಿಯಲ್ಲಿ ಸೇರಿಸುವಂತೆ ಕೇಂದ್ರ ಹೇಳಿದೆ.
ಕಳೆದ ಕೆಲ ತಿಂಗಳಿನಿಂದ ಕರ್ನಾಟಕದ ಬಳ್ಳಾರಿ ರಾಷ್ಟ್ರೀಯ ಸುದ್ದಿ ಮಾಡಿತ್ತು. ಕರ್ನಾಟಕ ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಒಡೆತನ ಓಬಳಾಪುರಂ ಮೈನಿಂಗ್ ಕಂಪನಿಯಿಂದ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ವಿರೋಧ ಪಕ್ಷ ವ್ಯಾಪಕ ಪ್ರತಿಭಟನೆ ನಡೆಸಿದ್ದವು. ಅಷ್ಟೇ ಅಲ್ಲದೇ, ಅಧಿವೇಶನದಲ್ಲಿ ತೀವ್ರ ಕೋಲಾಹಲ ಎದ್ದಿತ್ತು. ಐದಾರು ದಿನ ವಿರೋಧ ಪಕ್ಷದ ನಾಯಕರು ಸದನದಲ್ಲಿ ನಿದ್ದೆ ಹೊಡೆದಿರುವುದಲ್ಲದೇ, ಅಕ್ರಮ ಗಣಿಗಾರಿಕೆಯನ್ನು ಸಿಬಿಐಗೆ ವಹಿಸಬೇಕು ಎಂದು ಕಾಂಗ್ರೆಸ್ ಪಕ್ಷ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿತ್ತು.
ಅಕ್ರಮ ಗಣಿಗಾರಿಕೆಯನ್ನು ಆಂಧ್ರಪ್ರದೇಶ ಸರಕಾರ ಸಿಬಿಐ ತನಿಖೆಗೆ ವಹಿಸಿದೆ. ಹೀಗಾಗಿ ಕಳೆದ ನವೆಂಬರ್ ನಲ್ಲಿ ರಾಜ್ಯ ಪ್ರವಾಸ ಮಾಡಿದ್ದ ಕೇಂದ್ರ ಗಣಿ ಸಚಿವ ಬಿ ಕೆ ಹಂಡಿಕ್ ಅವರು, ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಜಾಲ ಇರುವುದರಿಂದ ಸಿಬಿಐ ತನಿಖೆಗೆ ಸಹಕರಿಸಬೇಕು ಎಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದರು. ಬಳ್ಳಾರಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೇಂದ್ರದ ಕಾನೂನು ಮಂತ್ರಿ ಗಣಿಗಾರಿಕೆ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಹೇಳಿದ್ದರು.
ಯಡಿಯೂರಪ್ಪ ಸ್ವಾಗತ : ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಉನ್ನತ ಸಮಿತಿ ರಚಿಸಿರುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸ್ವಾಗತಿಸಿದ್ದಾರೆ. ನೈಸರ್ಗಿಕ ಸಂಪನ್ಮೂಲ ಲೂಟಿಯಾಗುತ್ತಿದ್ದರೂ ಕೇಂದ್ರ ಸರಕಾರ ಈವರೆಗೂ ಕಣ್ಣುಮುಚ್ಚಿ ಕುಳಿತಿತ್ತು. ಏಕಾಏಕಿ ಪ್ರಧಾನಮಂತ್ರಿ ಅವರಿಗೆ ಜ್ಞಾನೋದಯವಾಗಿ ಸಮಿತಿ ರಚಿಸಿದ್ದಾರೆ ಇದನ್ನು ಕರ್ನಾಟಕ ಸ್ವಾಗತಿಸುತ್ತಿದೆ. ರಾಜ್ಯ ಸರಕಾರದ ಅದಿರು ರಫ್ತು ನಿಷೇಧ ಮಾಡಿ ಆದೇಶ ಹೊರಡಿಸಿದೆ. ಅಕ್ರಮ ಗಣಿಗಾರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.