ಹಾಲಪ್ಪ ರೇಪ್ ಕೇಸಿನಲ್ಲಿ 'ಬಂ' ಕೈವಾಡ?

ರಾಜ್ಯಾದ್ಯಂತ ತೀವ್ರ ಒತ್ತಡ ಬಂದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಹಾಲಪ್ಪ ಅತ್ಯಾಚಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದರು. ವಿಚಾರಣೆ ನಡೆಸುತ್ತಿರುವ ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಮಾಜಿ ಆಪ್ತ ಕಾರ್ಯದರ್ಶಿ ಹುಲ್ತಿಕೊಪ್ಪ ಶ್ರೀಧರ್ ಎಂಬುವವರು ಅತ್ಯಾಚಾರಕ್ಕೆ ಒಳಗಾದ ಚಂದ್ರಾವತಿ ಮತ್ತು ಅವರ ಪತಿ ವೆಂಕಟೇಶಮೂರ್ತಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿರುವುದು ಗೊತ್ತಾಗಿದೆ. ಹೀಗಾಗಿ ಶ್ರೀಧರ್ ಅವರನ್ನು ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದರಿಂದ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.
ವೆಂಕಟೇಶಮೂರ್ತಿ ಮತ್ತು ಚಂದ್ರಾವತಿ ದಂಪತಿಗಳ ಮನೆಗೆ ಭೋಜನಕ್ಕಾಗಿ ಬಂದಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ, ನಡುರಾತ್ರಿಯಲ್ಲಿ ವೆಂಕಟೇಶಮೂರ್ತಿ ಅವರನ್ನು ಮಾತ್ರೆ ತರಲು ಗೆಸ್ಟ್ ಹೌಸ್ ಗೆ ಕಳಿಸಿ ಅವರ ಪತ್ನಿ ಚಂದ್ರಾವತಿ ಮೇಲೆ ಅತ್ಯಾಚಾರ ನಡೆಸಿದ್ದರು ಎನ್ನುವುದು ಹಾಲಪ್ಪ ಅವರ ಮೇಲಿರುವ ಗಂಭೀರ ಆರೋಪ. ಇದೇ ಕಾರಣ ಅವರು ತಮ್ಮ ಮಂತ್ರಿ ಪದವಿಯನ್ನು ಕಳೆದುಕೊಂಡಿದ್ದು ಗೊತ್ತಿರುವ ಸಂಗತಿಯಾಗಿದೆ.
ನಾನು ನಿರಪರಾಧಿ. ಈ ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿಯೊಬ್ಬರ ಕೈಚಳಕದಿಂದ ನಾನು ಅತ್ಯಾಚಾರ ಪ್ರಕಕಣದಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹಾಲಪ್ಪ ನೇರವಾಗಿ ಮಾಜಿ ಸಿಎಂ ಬಂಗಾರಪ್ಪ ಅವರಡೆಗೆ ಬೊಟ್ಟು ಮಾಡಿ ತೋರಿಸಿದ್ದರು. ಹಾಲಪ್ಪ ಹೇಳಿಕೆಗೆ ತೀವ್ರ ಕೆರಳಿದ್ದ ಬಂಗಾರಪ್ಪ ನನ್ನ ತಂಟೆಗೆ ಬಂದರೆ ಧೂಳಿಪಟ ಮಾಡುವೆ ಎಂದು ಗುಟುರು ಹಾಕಿದ್ದರು.
ಈ ಇಬ್ಬರ ಮಧ್ಯೆ ಆಗಾಗ್ಗೆ ಮಾತಿನ ಸಮರಗಳು ನಡೆದೆ ಇದ್ದವು. ಹಾಲಪ್ಪ ಅವರನ್ನು ಬೆಳೆಸಿದ್ದು ಇದೇ ಬಂಗಾರಪ್ಪ ಎನ್ನುವುದು ವಿಶೇಷ ಸಂಗತಿ. ನಂತರ ಬದಲಾದ ರಾಜಕೀಯದಲ್ಲಿ ಹಾಲಪ್ಪ ಯಡಿಯೂರಪ್ಪ ಕ್ಯಾಂಪ್ ಗೆ ಸೇರಿಕೊಂಡಿದ್ದು ಬಂಗಾರಪ್ಪ ಅವರ ಪಿತ್ತ ನೆತ್ತಿಗೇರುವಂತೆ ಮಾಡಿತು. ಸೊರಬ ಕ್ಷೇತ್ರದಲ್ಲಿ ಬಂಗಾರಪ್ಪ ಅವರ ಮಗ ಮಧು ಬಂಗಾರಪ್ಪ ಅವರನ್ನು ಸೋಲಿಸಿ ಯಡಿಯೂರಪ್ಪ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದುದು, ಬಂಗಾರಪ್ಪ ಅವರ ಕಣ್ಣುಕುಕ್ಕುವಂತೆ ಮಾಡಿದ್ದು ಸತ್ಯ.












Click it and Unblock the Notifications