ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವು

ವಿದ್ಯಾನಗರ ಕ್ರಾಸ್ ಸಮೀಪವಿರುವ ಕಾಲೇಜಿನ ವಿದ್ಯಾರ್ಥಿನಿ ಸ್ಮಿತಾ ಮಾಹಿತಿ ವಿಜ್ಞಾನ(Info.Science)ದ ಏಳನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದರು .ನಾಲ್ಕು ವರ್ಷಗಳಿಂದ ಕಾಲೇಜು ಹಾಸ್ಟಲಿನಲ್ಲಿ ವಿದ್ಯಾರ್ಥಿನಿ ವಾಸಿಸುತ್ತಿದ್ದಳು.
ಎಂ.ಟೆಕ್ ಪ್ರವೇಶ ಪರೀಕ್ಷೆ ಸಹ ತೆಗೆದುಕೊಂಡಿದ್ದ ಸ್ಮಿತಾ ಅದಕ್ಕಾಗಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ಮಲ್ಲೇಶ್ವರದಲ್ಲಿ ತರಗತಿಗೆ ಹಾಜರಾಗುತ್ತಿದ್ದಳು ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾರಣ್ಯಪುರ ಪೊಲೀಸರು ತಿಳಿಸಿದರು.
ಶನಿವಾರ ಸಂಜೆ ಟ್ಯೂಷನ್ಗೆ ತೆರಳಿದ ಆಕೆಗೆ ಹಾಸ್ಟಲ್ಗೆ ವಾಪಸಾಗಲು ಬಸ್ ಸಿಗದ ಕಾರಣ ಹೈದರಾಬಾದಿನಲ್ಲಿ ಇರುವ ತಂದೆಯನ್ನು ಸಂಪರ್ಕಿಸಿ ಅವರ ಸೂಚನೆಯಂತೆ ದೊಡ್ಡಬೊಮ್ಮಸಂದ್ರದಲ್ಲಿ ವಾಸಿಸುತ್ತಿರುವ ಸಂಬಂಧಿ ಡಾ. ಜ್ಞಾನಪ್ರಕಾಶ್ ಮನೆಗೆ ತೆರಳಿದ್ದಾಳೆ. ಮಗಳು ಬರುತ್ತಿರುವ ವಿಷಯವನ್ನು ಆಕೆಯ ತಂದೆ ಸಂಬಂಧಿಗೆ ಸಹ ತಿಳಿಸಿದ್ದು ಅವರೇ ಬಂದು ಕರೆದೊಯ್ದಿದ್ದಾರೆ.
ಮೈಕೆ ನೋವು ಗುಳಿಗೆ ಕಾರಣವೇ?:ಶನಿವಾರ ರಾತ್ರಿ ಸಂಬಂಧಿ ಮನೆಯಲ್ಲೇ ಊಟ ಮಾಡಿ ಮಲಗಿದ್ದ ಸ್ಮಿತಾ ಬೆಳಗ್ಗೆ ತಂದೆಗೆ ಫೋನ್ ಮಾಡಿ ಕತ್ತು ಮತ್ತು ಮೈಕೈನೋಯುತ್ತಿದೆ ಎಂದಳು. ಅವರು ಜ್ಞಾನಪ್ರಕಾಶ್ ಅವರನ್ನು ಸಂಪರ್ಕಿಸಿ ಮಗಳಿಗೆ ಯಾವ ಔಷಧಿ ನೀಡಬೇಕು ಎಂದು ತಿಳಿಸಿದ್ದಾರೆ. ಸ್ಮಿತಾ ತಂದೆ ಹೇಳಿದ ಔಷಧಿ ತಮ್ಮ ಬಳಿ ಇಲ್ಲದಿದ್ದ ಕಾರಣ ಮತ್ತೊಂದು ಔಷಧಿ ನೀಡಿದ್ದಾರೆ.
ನಂತರ ಸ್ನಾನದ ಮನೆಗೆ ಹೋದ ಸ್ಮಿತಾ ಎಷ್ಟು ಸಮಯ ಕಳೆದರೂ ಬಾರದಿದ್ದಾಗ ಹೋಗಿ ನೋಡಿದರೆ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಆಕೆಯನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವ ವೇಳೆಗೆ ಆಕೆ ಮೃತಪಟ್ಟಿದ್ದಳು ಎಂದು ಜ್ಞಾನಪ್ರಕಾಶ್ ಪೊಲೀಸರಿಗೆ ತಿಳಿಸಿದ್ದಾರೆ.
ತಮ್ಮ ಮಗಳ ಸಾವಿಗೆ ಸಂಬಂಧಿ ಡಾ. ಜ್ಞಾನಪ್ರಕಾಶ್ ನೀಡಿದ ತಪ್ಪು ಔಷಧಿ ಹಾಗೂ ತೋರಿದ ನಿರ್ಲಕ್ಷ್ಯ ಕಾರಣ ಎಂದು ಮೃತ ವಿದ್ಯಾರ್ಥಿನಿ ತಂದೆ ವೆಂಕಟರೆಡ್ಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಶವವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯುತ್ತಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾರಣ್ಯಪುರ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications