ವಿರೋಧಿಗಳ ಸದ್ದಡಗಿಸಲು ಶ್ರೀರಾಮುಲು ವ್ರತ
ಕಾಂಗ್ರೆಸ್ ಪಾದಯಾತ್ರೆ ಮತ್ತು ಮುಖ್ಯಮಂತ್ರಿಗಳ ತೆಗೆದುಕೊಂಡಿರುವ ಅದಿರು ರಫ್ತು ನಿಷೇಧದಿಂದಾಗಿ ಬೇಸತ್ತಿರುವ ಶ್ರೀರಾಮುಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಗುಸುಗುಸು ಬೆಳಗ್ಗೆಯಿಂದಲೇ ಆರಂಭವಾಗಿತ್ತು. ಕೇಶಮುಂಡನ ಮಾಡಿಸಿಕೊಂಡಿದ್ದ ಶ್ರೀರಾಮುಲು ಮಧ್ಯಾಹ್ನದ ಹೊತ್ತಿಗೆ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಬಳ್ಳಾರಿ ಜನರು ನಾವು. ಎಂತಹ ಸಂಕಷ್ಟ ಬಂದರೂ ಎದುರಿಸುತ್ತಿವೆ ಹೊರತು ಬೆನ್ನುಕೊಟ್ಟು ಓಡಿ ಹೋಗುವವರಲ್ಲ. ಕಾಂಗ್ರೆಸ್ ಪಾದಯಾತ್ರೆಗೆ ಹೆದರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಾದಯಾತ್ರೆಯನ್ನು ಸಮರ್ಥವಾಗಿ ಎದುರಿಸಲು ನಾವು ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲೆಯಾದ್ಯಂತ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಕಾಂಗ್ರೆಸ್ಸಿಗರ ಕೆಟ್ಟ ಕಣ್ಣು ಬಳ್ಳಾರಿ ಮೇಲೆ ಬೀಳಬಾರದು ಎಂಬ ಕಾರಣಕ್ಕೆ ನಾನು ಕೇಶಮುಂಡನ ಮಾಡಿಸಿಕೊಂಡಿದ್ದೇನೆ. ಇದರ ಜೊತೆಗೆ ಪ್ರತಿ ತಾಲ್ಲೂಕಿನಲ್ಲೂ ದೃಷ್ಟಿಗೊಂಬೆಗಳನ್ನು ಕೂರಿಸಲಾಗುವುದು. ಬರೀಗಾಲಲ್ಲಿ ನಡೆಯುತ್ತೇನೆ, ಕಪ್ಪು ಪಟ್ಟಿ ಧರಿಸುತ್ತೇನೆ, ವರಮಹಾಲಕ್ಷ್ಮಿ ದಿನದವರೆಗೂ(ಆ.20) ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಶ್ರೀರಾಮುಲು ಹೇಳಿದರು.
ಕಾಂಗ್ರೆಸ್ ಪಾದಯಾತ್ರೆಗೆ ಪ್ರತಿಯಾಗಿ ಆರೋಗ್ಯ ಸಚಿವ ಬಿ ಶ್ರೀರಾಮುಲು ಬಳ್ಳಾರಿ ಜಿಲ್ಲೆಯಾದ್ಯಂತ ಜನಜಾಗೃತಿ ಆಂದೋಲನ ನಡೆಸಲು ನಿರ್ಧರಿಸಿದ್ದಾರೆ. ನಗರದ ದುರ್ಗಮ್ಮನ ಗುಡಿಗೆ ತೆರಳಿ ಪೂಜೆ ನೆರವೇರಿಸಿ ತಮ್ಮ ಜನಜಾಗೃತಿ ಆಂದೋಲನ ಆರಂಭಿಸಿದರು. ಜು.29ರಂದು ಚೆಳಗುರ್ಕಿ, ಜು.30 ರಂದು ತೆಕ್ಕಲಕೋಟೆ, ಜು. 31 ರಂದು ಕಂಪ್ಲಿ, ಕುರಗೋಡು, ಆ.1 ರಂದು ಹೊಸಪೇಟೆ, ಕಮಲಾಪುರ, ಆ 3 ರಂದು ಕೂಡ್ಲಿಗಿ, ಹೊಸಹಳ್ಳಿ, ಆ.4 ರಂದು ಹಡಗಲಿ, ಹೊಳಲು, ಆ. 5 ರಂದು ಹಗರಿಬೊಮ್ಮನಹಳ್ಳಿ-ಮರಿಯಮ್ಮನಹಳ್ಳಿ, ಆ 6 ರಂದು ಸಂಡೂರು-ತೋರಣಗಲ್ಲು ನಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಶ್ರೀರಾಮುಲು ವಿವರಿಸಿದರು.