ಕಾಂಗ್ರೆಸ್ ಮೇಲೆ ಗಣಿ ಬಾಂಬ್ ಎಸೆದ ಜನಾರ್ದನರೆಡ್ಡಿ
ಬಳ್ಳಾರಿಯಲ್ಲಿ ಕಾಂಗ್ರೆಸ್ಸಿಗರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಎಲ್ಲ ದಾಖಲೆಗಳನ್ನು ಇಂದು ಮಾಧ್ಯಮಕ್ಕೆ ಇಂದು ಬಿಡುಗಡೆ ಮಾಡಿದ್ದಾರೆ. ಕಳೆದ 60 ವರ್ಷಗಳಿಂದ ಗಣಿಗಾರಿಕೆಯಲ್ಲಿ ತೊಡಗಿರುವ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರೆಡ್ಡಿ, ಹಿರಿಯ ಕಾಂಗ್ರೆಸ್ ನಾಯಕ ಎಂ ವೈ ಘೋರ್ಪಡೆಯಿಂದ ಹಿಡಿದು ಹೊಸಪೇಟೆಯ ಮಾಜಿ ಶಾಸಕ ಎಚ್ ಆರ್ ಗವಿಯಪ್ಪ ಅವರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂದಿದ್ದಾರೆ. ಅಕ್ರಮ ಗಣಿಗಾರಿಕೆಯ ತಂದೆ-ತಾಯಿ ಕಾಂಗ್ರೆಸ್ ನಾಯಕರು. ಅದರಿಂದ ಹಣ ಮಾಡಿರುವುದು ಕೂಡಾ ಇದೇ ಕಾಂಗ್ರೆಸ್ಸಿಗರೆ ಎಂದು ರೆಡ್ಡಿ ಹೇಳಿದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸಂಪೂರ್ಣವಾಗಿ ನಾಶವಾಗಿದೆ ಎನ್ನುವುದು ಗೊತ್ತಿರುವ ಸಂಗತಿ. ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಗಣಿಗಾರಿಕೆ ವಿರುದ್ಧವಲ್ಲ. ಕಾಂಗ್ರೆಸ್ ಬಚಾವೋ ಆಂದೋಲನ ಎಂದು ರೆಡ್ಡಿ ವ್ಯಂಗ್ಯವಾಡಿದರು. ನಮ್ಮ ವಿರುದ್ಧ ರಾಜ್ಯ ಕಾಂಗ್ರೆಸ್ಸಿಗರಲ್ಲ, ರಾಹುಲ್ ಗಾಂಧಿ, ಪ್ರಿಯಾಂಕ, ಸೋನಿಯಾ ಗಾಂಧಿ ಬಂದರೂ ನಮ್ಮನ್ನು ಯಾರು ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಂತಹ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದು ಕಾಂಗ್ರೆಸ್ ಪಾದಯಾತ್ರೆಗೆ ತಿರುಗೇಟು ನೀಡಿದರು.
ರೆಡ್ಡಿಯ ಪಟ್ಟಿಯಲ್ಲಿ ಘಟಾನುಘಟಿ ಕಾಂಗ್ರೆಸ್ಸಿಗರು
ಮಾಜಿ ಸಚಿವ ಎಂ ವೈ ಘೋರ್ಪಡೆ 20 ಎಕರೆ, ಅಂಬಿಕಾ ಘೋರ್ಪಡೆ, ಕಾರ್ತಿಕ್ ಘೋರ್ಪಡೆ ಕುಟುಂಬ 50 ಎಕರೆ, ಅನಿಲ್ ಲಾಡ್ ಕುಟುಂಬದಿಂದ 75 ಎಕರೆ, ಬಳ್ಳಾರಿ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಅಬ್ಧುಲ್ ವಹಾಬ್ ಅವರು ಹೆಸರಿನಲ್ಲಿ ಐದು ಕಂಪನಿಗಳಿವೆ. ಅವೆಲ್ಲವೂ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿವೆ. ಒಟ್ಟು 12 ಎಕರೆಯಲ್ಲಿ ಅಕ್ರಮ ಗಣಿಗಾರಿಕೆಯನ್ನು ವಹಾಬ್ ನಡೆಸಿದ್ದಾರೆ. ಕೆಪಿಸಿಸಿ ಮಾಜಿ ಅಲ್ಲಂ ವೀರಭದ್ರಪ್ಪ ಅವರ ಮಗ ಅಲ್ಲಂ ಪ್ರಶಾಂತ್ ಅವರು 12 ಎಕರೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ. ಎಚ್ ಜಿ ರಾಮುಲು ಅವರ 63 ಎಕರೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ.
ರೆಡ್ಡಿಯ ಮಾಧ್ಯಮಗೋಷ್ಠಿಯಲ್ಲಿ ತೀವ್ರ ಆಕ್ರೋಶವಾಗಿ ಮಾತನಾಡಿದ್ದು, ಉದ್ಯಮಿ ರಾಹುಲ್ ಬಲ್ಡೋಟಾ ಅವರ ಮೇಲೆ. ರಾಹುಲ್ ಬಲ್ಡೋಟಾ ಅವರನ್ನು ಮೈನಿಂಗ್ ನ ವೀರಪ್ಪನ್ ಎಂದು ಕಿಡಿಕಾರಿದ ರೆಡ್ಡಿ, ಇವರು 125 ಎಕರೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ. ಉದ್ಯಮಿ ಎಂ ಎಸ್ ಜೈನ್ ಹಾಗೂ ರಾಜೇಂದ್ರ ಜೈನ್ ಅವರು 45 ಎಕರೆ, ಹೊಸಪೇಟೆಯ ಮಾಜಿ ಶಾಸಕ ಎಚ್ ಆರ್ ಗವಿಯಪ್ಪ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ. ಇವರುಗಳ ನಡೆಸಿದ ಅಕ್ರಮ ಗಣಿಗಾರಿಕೆಯಿಂದ ಸರಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರುಪಾಯಿ ನಷ್ಟವಾಗಿದೆ ಎಂದು ಜನಾರ್ದನರೆಡ್ಡಿ ಮಾಧ್ಯಮಕ್ಕೆ ವಿವರಿಸಿದರು.
ಅಗಸ್ಟ್ ತಿಂಗಳಲ್ಲಿ ವರಮಾಹಾಲಕ್ಷ್ನಿ ಪೂಜೆಗೆ ತಾಯಿ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಳ್ಳಾರಿ ಮತ್ತು ಮೈಸೂರಿನಲ್ಲಿ ಸ್ವಾಭಿಮಾನಿ ಸಮಾವೇಶವನ್ನು ಏರ್ಪಡಿಸಲಾಗುವುದು. ಅಕ್ರಮ ಗಣಿಗಾರಿಕೆಯನ್ನು ಸಿಬಿಐ ವಹಿಸುವ ಮಾತೇ ಇಲ್ಲ. ಲೋಕಾಯುಕ್ತರೇ ತನಿಖೆಯನ್ನು ಮುಂದುವರಿಸುತ್ತಾರೆ. ಅಲ್ಲದೇ, ಹಿರಿಯ ಪತ್ರಕರ್ತರ ಸಮಿತಿಯ ರಚಿಸಿ ಅವರ ಮೂಲಕವೂ ಅಕ್ರಮ ಗಣಿಗಾರಿಕೆಯ ತನಿಖೆ ಮಾಡಿಸಲು ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಳ್ಳುವೆ ಎಂದು ರೆಡ್ಡಿ ವಿವರಿಸಿದರು.