ಸರ್ಕಾರ ಉರುಳಿಸುವ ಯತ್ನ ಮಾಡೋಲ್ಲ: ದೇವೇಗೌಡ
ಬೆಂಗಳೂರು, ಜು.14: ರಾಜ್ಯ ಬಿಜೆಪಿ ಸರ್ಕಾರವನ್ನು ಉರುಳಿಸುವ ಯತ್ನಕ್ಕೆ ವಿರೋಧ ಪಕ್ಷ ಕೈ ಹಾಕದು. ಆದರೆ ಮುಖ್ಯಮಂತ್ರಿ ರೆಡ್ಡಿಗಳ ಕೈಗೊಂಬೆಯಾಗಿ ವರ್ತಿಸುವುದನ್ನು ಮುಂದುವರಿಸಿದರೆ ಆ ತಕ್ಷಣವೇ ರಾಜಿನಾಮೆ ನೀಡಬೇಕೆಂದು ಜೆಡಿಎಸ್ ವರಿಷ್ಠ ದೇವೇಗೌಡ ಆಗ್ರಹಿಸಿದ್ದಾರೆ.
ರೆಡ್ಡಿಗಳು ಹಾಗೂ ರಾಜ್ಯದ ಖನಿಜ ಸಂಪತ್ತು - ಈ ಎರಡರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಯಾವುದು ಮುಖ್ಯ ಎಂದು ಅವರು ಪ್ರಶ್ನಿಸಿದರು.
ಅಕ್ರಮ ಗಣಿಗಾರಿಕೆಯನ್ನು ಸಿಬಿಐಗೆ ವಹಿಸುವಂತೆ ವಿಧಾನಮಂಡಲದಲ್ಲಿ ಸೋಮವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಪ್ರತಿಪಕ್ಷ ಸದಸ್ಯರನ್ನು ಮಂಗಳವಾರ ವಿಧಾನಸಭೆ ಮೊಗಸಾಲೆಯಲ್ಲಿ ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಸಂಪತ್ತನ್ನು ರಕ್ಷಿಸುವುದು ಮುಖ್ಯಮಂತ್ರಿ ಕರ್ತವ್ಯ. ಹೀಗಾಗಿ ಯಡಿಯೂರಪ್ಪ ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ಮಹಾ ಭಾರತದ ಸನ್ನಿವೇಶವೊಂದನ್ನು ಉದಾಹರಿಸಿದ ದೇವೇಗೌಡರು, ಧೃತರಾಷ್ಟ್ರ ತನ್ನ ಪುತ್ರ ಪ್ರೇಮದಿಂದ ಹೊಟ್ಟೆಯೊಳಗೆ ಅಧಿಕಾರಕ್ಕಾಗಿ ತಹತಹಿಸುತ್ತಿದ್ದು, ಶ್ರೀ ಕೃಷ್ಣನ ಸಂಧಾನಕ್ಕೆ ಒಪ್ಪದಂತೆ ನುಡಿದಿದ್ದ. ಆದರೆ ಭೀಷ್ಮ, ಶ್ರೀಕೃಷ್ಣನ ಮಾತು ಒಪ್ಪದಿದ್ದರೆ ನಾಶವಾಗುತ್ತೀರೆಂದು ಹಿತವಚನ ಹೇಳಿದ್ದ. ಇವೆರಡರಲ್ಲಿ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಯಾವ ಪಾತ್ರ ವಹಿಸುತ್ತಾರೆ? ಎಂದು ದೇವೇಗೌಡ ಪ್ರಶ್ನಿಸಿದರು
ಸುಮಾರು 14 ವರ್ಷಗಳ ನಂತರ ಸದನಕ್ಕೆ ಗೌಡರು ಕಾಲಿರಿಸುತ್ತಿದ್ದಂತೆ, ಧರಣಿ ನಿರತ ಶಾಸಕರಲ್ಲಿ ಮಿಂಚಿನ ಸಂಚಾರವಾಯಿತು. ಒಂದು ಕಾಲದ ಶಿಷ್ಯ ಸಿದ್ದರಾಮಯ್ಯ ಅವರ ಕೈಕುಲುಕಿ, ಒಟ್ಟಿಗೆ ಕಾಫಿ ಕುಡಿದು, ಕುಶಲೋಪರಿ ವಿಚಾರಿಸಿದ ಗೌಡರು ಎಲ್ಲರ ಕೇಂದ್ರಬಿಂದುವಾಗಿದ್ದರು.