ರೆಡ್ಡಿಗಳ ವಿರುದ್ಧದ ಸಮರಕ್ಕೆ ರಾಹುಲ್ ಗಾಂಧಿ
ಸದನದಲ್ಲಿ ನಡೆದ ವಾಗ್ದಾಳಿ ಹಾಗೂ ಕಚ್ಚಾಟ ಕಾಂಗ್ರೆಸ್ ನಲ್ಲಿ ತೀವ್ರ ಚಟುವಟಿಕೆಗೆ ಕಾರಣವಾಗಿದೆ. ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕರೆ ತರಲು ಸಿದ್ಧತೆ ನಡೆಸಲಾಗಿದೆ.
ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ನೇತೃತ್ವದಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನಕ್ಕೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಜ್ರಮಹೋತ್ಸವ ಸಮಾರಂಭ ನಡೆಸಿ ಸೋನಿಯಾಗಾಂಧಿ ಅವರ ಭಾಷಣ ಏರ್ಪಡಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಎರಡು ಸಮಾವೇಶಗಳು ಒಂದಿಷ್ಟು ಶಕ್ತಿ ನೀಡಲಿದೆ ಎಂಬುದು ಕೆಪಿಸಿಸಿ ನಂಬಿಕೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪ್ರಭಾವ ತಗ್ಗಿಸಬೇಕು, ಕಾಂಗ್ರೆಸ್ ಯುವ ಕಾರ್ಯಕರ್ತರನ್ನು ಹುರಿದುಂಬಿಸಬೇಕು ಎಂಬ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ದೆಹಲಿಗೆ ಕೆಪಿಸಿಸಿ ನಾಯಕರು: ಜೂ.17 ರಂದು ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ಬೇಲೆಕೇರಿ ಅದಿರು ನಾಪತ್ತೆ ಬಗ್ಗೆ ತನಿಖೆ ನಡೆಸಬೇಕು, ಅಕ್ರಮ ಗಣಿಗಾರಿಕೆ ತಡೆಗಟ್ಟಬೇಕು, ಹಲವು ಕೇಸ್ ಗಳನ್ನು ಸಿಬಿಐಗೆ ಒಪ್ಪಿಸುವುದು ಇವೇ ಮುಂತಾದ ಮನವಿಗಳನ್ನು ಪ್ರಧಾನಿ ಅವರಿಗೆ ನೀಡಲಿದ್ದಾರೆ.
ಬಳ್ಳಾರಿ ಬಚಾವೋ ಆಂದೋಲನ:ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸಿದ್ದರಾಮಯ್ಯ ಅವರ ಮೇಲೆ 'ಸಿಂಪಥಿ' ತೋರಿಸಿದ್ದು, ಸದನದ ಕಚ್ಚಾಟವನ್ನು ಅಭೂತಪೂರ್ವ ಘಟನೆ ಎಂದಿದ್ದಾರೆ. ಅಲ್ಲದೆ ಬಳ್ಳಾರಿಯನ್ನು ರೆಡ್ಡಿಗಳ ಕಪಿಮುಷ್ಟಿಯಿಂದ ತಪ್ಪಿಸಲು ಬಳ್ಳಾರಿಗೆ ತೆರಳಿ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.