ಹೆಗ್ಡೆ ಬೇಡಿಕೆಗಳನ್ನು ರಾಜ್ಯ ಶೀಘ್ರ ನೆರವೇರಿಸಲಿ; ಆಡ್ವಾಣಿ

ಕರ್ನಾಟಕ ಲೋಕಾಯುಕ್ತರಾಗಿ ಮುಂದುವರೆಯ ಬೇಕು ಎಂಬ ತಮ್ಮ ಮಾತಿಗೆ ತಕ್ಷಣ ಸ್ಪಂದಿಸಿದ್ದಕ್ಕೆ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಳನ್ನು ತಿಳಿಸುತ್ತೇನೆ. ಶೀಘ್ರದಲ್ಲೆ ಅವರ 'ಪರಮಾಧಿಕಾರ' ಬೇಡಿಕೆ ಈಡೇರಲಿದೆ ಎಂದು ಆಡ್ವಾಣಿ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ಹಾಗೂ ಭ್ರಷ್ಟಾಚಾರವನ್ನು ತಡೆಯಲು ಸರಕಾರ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಹೆಗ್ಡೆ ಅವರು ಜೂನ್.23ರಂದು ರಾಜೀನಾಮೆ ಸಲ್ಲಿಸಿದ್ದರು.
ಜುಲೈ 3ರಂದು ಆಡ್ವಾಣಿ ಅವರ ಸೂಚನೆ ಮೇರೆಗೆ ಹೆಗ್ಡೆ ಅವರು ರಾಜೀನಾಮೆಯನ್ನು ಹಿಂಪಡೆದಿದ್ದರು. ಭ್ರಷ್ಟಾಚಾರ ತಡೆಗೆ ಹೆಚ್ಚಿನ ಅಧಿಕಾರ ಕೊಡಿಸುವ ಭರವಸೆಯನ್ನು ಆಡ್ವಾನಿ ನೀಡಿದ್ದರು. ಸಂತೋಷ್ ಹೆಗ್ಡೆ ಅವರ ತಂದೆ ಮಾಜಿ ಸಂಸದ ಕೆ ಎಸ್ ಹೆಗ್ಡೆ ಅವರು ಭಾರತದ ರಾಷ್ಟ್ರಪತಿಯಾಗುವ ಅವಕಾಶವಿತ್ತು ಎಂದು ತಮ್ಮ ಬ್ಲಾಗಿನಲ್ಲಿ ಆಡ್ವಾಣಿ ಹಳೆಯದನ್ನು ನೆನಪಿಸಿಕೊಂಡಿದ್ದಾರೆ.
ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರೊಂದಿಗೆ ರಾಷ್ಟ್ರಪತಿ ಯಾರಾಗ ಬೇಕು ಎಂಬ ಚರ್ಚೆ ನಡೆದಿತ್ತು...ರಾಷ್ಟ್ರಪತಿ ಹುದ್ದೆಗೆ ನ್ಯಾಯಮೂರ್ತಿ ಕೆ ಎಸ್ ಹೆಗ್ಡೆ ಅವರಿಗಿಂತಲೂ ಉತ್ತಮ ವ್ಯಕ್ತಿಯ ಹೆಸರು ನನಗೆ ನೆನಪಾಗುತ್ತಿಲ್ಲ ಎಂದು ಮೊರಾರ್ಜಿ ಅವರಿಗೆ ತಾವು ಹೇಳಿದ್ದಾಗಿ ಆಡ್ವಾಣಿ ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ.
ಆದರೆ 1977ರಲ್ಲಿ ಕೆ ಎಸ್ ಹೆಗ್ಡೆ ಅವರ ಬದಲಾಗಿ ಎನ್ ಸಂಜೀವ ರೆಡ್ಡಿ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರು. ಕೆ ಎಸ್ ಹೆಗ್ಡೆ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದರು ಎಂದು ಆಡ್ವಾಣಿ ಹಳೆಯ ನೆನಪುಗಳನ್ನು ಕೆದಕಿದ್ದಾರೆ. ರಾಜ್ಯ ಸರಕಾರ ಲೋಕಾಯುಕ್ತರಿಗೆ ರಾಜಕಾರಣಿಗಳನ್ನು ಬಿಟ್ಟು ಅಧಿಕಾರಿಗಳ ಮೇಲೆ ದಾಳಿ ನಡೆಸುವ ಅಧಿಕಾರ ನೀಡಿದ್ದಾರೆ.
ಸಂತೋಷ್ ಹೆಗ್ಡೆ ಅವರು ಕೇಳಿದ್ದರಲ್ಲಿ ಶೇ.50ರಷ್ಟು ಅಧಿಕಾರವನ್ನು ನೀಡಲಾಗಿದೆ. ಏನು ಅಧಿಕಾರ ನೀಡಿದ್ದಾರೋ ಅಷ್ಟರಲ್ಲೆ ಕೆಲಸ ಮುಂದುವರಿಕೊಂಡು ಹೋಗುವುದಾಗಿ ಹೆಗ್ಡೆ ಅವರು ಹೇಳಿದ್ದಾರೆ. ಎಲ್ಲಿಯ ತನಕ ಕೆಲಸ ಮಾಡಲು ಸಾಧ್ಯವೋ ಅಲ್ಲಿ ತನಕ ಕೆಲಸ ನಿರ್ವಹಿಸುವ ಮಾತನ್ನು ಹೇಳಿದ್ದಾರೆ.












Click it and Unblock the Notifications