ಲೋಕಾಯುಕ್ತರಿಗೆ ಸಿಕ್ತು ಹೆಚ್ಚಿನ ಅಧಿಕಾರ
ಈ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಕಾರ್ಯದರ್ಶಿಸೇರಿದಂತೆ ಎಲ್ಲಾ ಉನ್ನತ ಅಧಿಕಾರಿಗಳು ಈಗ ಲೋಕಾಯುಕ್ತರ ತನಿಖಾ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂಬ ವಿಷಯವನ್ನು ಸದನದ ಮುಂದೆ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಘೋಷಿಸಿದರು.
ಆದರೆ, ಭ್ರಷ್ಟಾಚಾರದ ವಿರುದ್ಧ ಈ ಸಮರದಲ್ಲಿ ಸಚಿವರು, ಶಾಸಕರು ಹಾಗೂ ನಾಮನಿರ್ದೇಶಿತ ಸದಸ್ಯರನ್ನು ಹೊರತುಪಡಿಸಿ ಉಳಿದೆಲ್ಲಾ ಅಧಿಕಾರ ವರ್ಗದವರನ್ನು ಲೋಕಾಯುಕ್ತರು ತನಿಖೆ ಮಾಡಬಹುದು. ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿನಿಯಕ್ಕೆ ತಿದ್ದುಪಡಿ ತರಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ಹುದ್ದೆಗಳು ರಾಜೀನಾಮೆಯಿಂದ, ಇಲ್ಲವೇ ನಿವೃತ್ತಿಯಿಂದ ತೆರವಾದಾಗ ಒಬ್ಬರ ಗೈರು ಹಾಜರಿಯಲ್ಲಿ ಮತ್ತೊಬ್ಬರು ಅಧಿಕಾರ ಚಲಾಯಿಸುವ ಅವಕಾಶ ಕಲ್ಪಿಸಲಾಗಿದೆ. ಲೋಕಾಯುಕ್ತರು ಸ್ವಪ್ರೇರಣೆಯಿಂದ ತನಿಖೆ ನಡೆಸುವ ಮುನ್ನ ಉದ್ದೇಶಿತ ಕ್ರಮ ಹಾಗೂ ಯಾವ ದೂರಿಗೆ ಸಂಬಂಧಿಸಿದ್ದು ಎಂಬುದು ಲಿಖಿತ ರೂಪದಲ್ಲಿ ದಾಖಲಿಸಬೇಕಾಗಿದೆ.
20 ಸಾವಿರ ವೇತನ ಶ್ರೇಣಿಯ ಅಥವಾ ಅದಕ್ಕಿಂತ ಹೆಚ್ಚಿನ ಸಂಬಳ ಪಡೆವ ಸಾರ್ವಜನಿಕ ಅಧಿಕಾರಿಗಳು ತನಿಖಾ ವ್ಯಾಪ್ತಿಗೆ ಒಳಪಡುತ್ತಾರೆ. ತನಿಖೆ ನಡೆಸಲು ರಾಜ್ಯ ಅಥವಾ ಕೇಂದ್ರ ಸರ್ಕಾರ ನೆರವನ್ನು ಲೋಕಾಯುಕ್ತರು ಬಳಸಿಕೊಳ್ಳಬಹುದು ಎಂದು ಯಡಿಯೂರಪ್ಪ ತಿಳಿಸಿದರು.