ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಕೃತಿಯಿಂದ ಮಲೇರಿಯಾ ರೋಗ ಗುಣಮುಖ

By * ಕೆಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News

Malaria eradication week in Shivamogga
ಶಿವಮೊಗ್ಗ, ಜು. 9 : ವೈದ್ಯಕೀಯದಲ್ಲಿ ಪ್ರಾಕೃತಿಕ ಚಿಕಿತ್ಸೆಯನ್ನು ಅಳವಡಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಿದಲ್ಲಿ ಪರಿಣಾಮಕಾರಿ ಚಿಕಿತ್ಸೆ ಸಾಧ್ಯ ಎಂದು ಜಿ.ಪಂ.ಅಧ್ಯಕ್ಷ ಹೆಚ್.ಸಿ. ಬಸವರಾಜಪ್ಪ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ವೈದ್ಯಕೀಯ ಸಂಘದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ ಮತ್ತು ಜಿಲ್ಲಾ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಹಾಗೂ ವರ್ಷಾಚರಣೆ-2010 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಅನಾದಿ ಕಾಲದಿಂದಲೂ ಹಲವು ರೀತಿಯ ರೋಗಗಳಿದ್ದು, ಅವುಗಳಲ್ಲಿ ಇಂದು ಅನೇಕ ರೋಗಗಳು ಇಲ್ಲದಂತಾಗಿವೆ. ಆದರೆ, ಮಲೇರಿಯಾ ರೋಗ ಮಾತ್ರ ನಿಯಂತ್ರಣಕ್ಕೆ ಬಾರದೆ ಹರಡುತ್ತಲೇ ಇದೆ. ಇದಕ್ಕೆ ಮುಖ್ಯವಾಗಿ ಸುತ್ತ ಮುತ್ತಲಿನ ಪರಿಸರ ಸ್ವಚ್ಛತೆ ಇಲ್ಲದಿರುವುದೇ ಕಾರಣವಾಗಿದೆ. ಹೀಗಾಗಿ, ರೋಗ ನಿಯಂತ್ರಣಕ್ಕೆ ಸುತ್ತಮುತ್ತಲ ಪರಿಸರವನ್ನು ಸ್ವಚ್ಛತೆಯಿಂದಿಟ್ಟುಕೊಳ್ಳುವುದೇ ಇದಕ್ಕೆ ಪರಿಹಾರವಾಗಿದೆ ಎಂದರು.

ರೋಗ ನಿಯಂತ್ರಿಸುವಲ್ಲಿ ಪ್ರಕೃತಿಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು. ಇದರ ಜೊತೆಗೆ, ವೈದ್ಯಕೀಯದಲ್ಲೂ ಪ್ರಾಕೃತಿಕ ಚಿಕಿತ್ಸೆಯನ್ನು ಬಳಸಿಕೊಳ್ಳಬೇಕು. ಇದರಿಂದ ಆರೋಗ್ಯ ಜೀವನವನ್ನು ರೋಗಿಗಳಿಗೆ ನೀಡಬಹುದಾಗಿದೆ. ಹಿಂದೆ ಬೆಳೆ ಬೆಳೆಯುವ, ಅಡುಗೆ ಸಿದ್ಧಪಡಿಸುವ, ಊಟ ಮಾಡುವ ಪದ್ಧತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈಗಿನ ಈ ಎಲ್ಲಾ ಪದ್ಧತಿಗಳಲ್ಲಿ ಗಣನೀಯವಾಗಿ ಬದಲಾವಣೆಯಾಗಿರುವುದನ್ನು ಕಾಣಬಹುದಾಗಿದೆ. ಇದರಿಂದಾಗಿ, ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗುತ್ತಿದೆ ಎಂದು ಹೇಳಿದರು.

ಹೀಗಾಗಿ, ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಮೊದಲು ರೋಗ ಬರದ ಹಾಗೆ ನೋಡಿಕೊಳ್ಳುವುದು ಉತ್ತಮವಾಗಿದೆ. ಇದರ ಜೊತೆಗೆ, ಇಂತಹ ಮಾಸಾಚರಣೆ ಯಶಸ್ವಿಯಾಗಬೇಕಾದರೆ ಜನಸಾಮಾನ್ಯರಿಗೆ ಕಾರ್ಯಕ್ರಮ ತಲುಪಬೇಕು. ಅದರಲ್ಲೂ ಹಳ್ಳಿಗಳಲ್ಲಿ ಅವಿದ್ಯಾವಂತರಿಗೆ ಅರಿವು ಮೂಡಿಸಿದಲ್ಲಿ ಇಂತಹ ಕಾರ್ಯಕ್ರಮ ಏರ್ಪಡಿಸಿದ್ದಕ್ಕೂ ಸಾರ್ಥಕತೆ ದೊರಕುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|.ಜಿ.ಹೆಚ್.ಚನ್ನಬಸಪ್ಪ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ|.ಜೆ.ಆರ್.ರುದ್ರಪ್ಪ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ|.ಕೆ.ಬಿ.ಶೇಖರ್, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X