ನ್ಯಾ. ಸಂತೋಷ ಹೆಗ್ಡೆ ರಾಜೀನಾಮೆ ವಾಪಸ್
ಬೆಂಗಳೂರು, ಜು. 3 : ರಾಜ್ಯ ಸರಕಾರದ ಕಾರ್ಯವೈಖರಿ, ಹೆಚ್ಚಿನ ಅಧಿಕಾರ ನೀಡಲು ತೋರಿದ ನಿರಾಸಕ್ತಿಯಿಂದ ಬೇಸತ್ತು ರಾಜೀನಾಮೆ ನೀಡಿದ್ದ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ಒತ್ತಾಯಕ್ಕೆ ಮಣಿದು ರಾಜೀನಾಮೆ ಹಿಂದಕ್ಕೆ ಪಡೆದಿದ್ದಾರೆ.
"ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ನನಗೆ ತಂದೆ ಸಮಾನರು. ಅವರು ರಾಜೀನಾಮೆ ವಾಪಸ್ ಪಡೆಯುವಂತೆ ನನಗೆ ಮನವಿ ಮಾಡಿದ್ದಾರೆ. ಅವರ ಮಾತು ಮೀರುವ ಧೈರ್ಯವಾಗಲಿ, ಶಕ್ತಿಯಾಗಲಿ ನನಗಿಲ್ಲ. ನಾನು ಇಟ್ಟಿರುವ ಬೇಡಿಕೆಯನ್ನು ಸರಕಾರ ಪರಿಶೀಲನೆ ನಡೆಸುವ ವಾಗ್ದಾನ ಮಾಡಿದೆ. ಹೀಗಾಗಿ ನನ್ನ ರಾಜೀನಾಮೆ ಪತ್ರವನ್ನು ವಾಪಸ್ ಪಡೆದುಕೊಳ್ಳುತ್ತಿರುವೆ" ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ ಹೆಗ್ಡೆ ಘೋಷಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಕಾನೂನು ಸಚಿವ ಸುರೇಶ್ ಕುಮಾರ್ ಅವರು ಲೋಕಾಯುಕ್ತ ಸಂತೋಷ ಹೆಗ್ಡೆ ಅವರ ನಿವಾಸಕ್ಕೆ ಭೇಟಿ ಮಾಡಿ ಚರ್ಚೆ ನಡೆಸಿದ ನಂತರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಲೋಕಾಯುಕ್ತ ಇಲಾಖೆ ಇಟ್ಟಿರುವ ಎಲ್ಲ ಬೇಡಿಕೆಗಳನ್ನು ಸರಕಾರ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಇಲಾಖೆಗೆ ಹೆಚ್ಚಿನ ಅಧಿಕಾರ ನೀಡುತ್ತಾರೆ ಎಂದು ಭರವಸೆಯೊಂದಿಗೆ ನನ್ನ ರಾಜೀನಾಮೆಯನ್ನು ವಾಪಸ್ ಪಡೆದುಕೊಂಡಿರುವೆ ಎಂದು ಹೆಗ್ಡೆ ಹೇಳಿದರು.
ಕುರ್ಚಿಗಿಂತ ರಾಜ್ಯದ ಹಿತ ಮುಖ್ಯ
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ರಾಜ್ಯದ ಹಿತ ಕಾಯಲು ಸರಕಾರ ಸಿದ್ಧವಿದೆ. ಕುರ್ಚಿಗಿಂತ ರಾಜ್ಯದ ಹಿತವೇ ಮುಖ್ಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಲೋಕಾಯುಕ್ತ ನ್ಯಾಯಮೂರ್ತಿಗಳು ಸರಕಾರದ ಮುಂದೆ ಇಟ್ಟಿರುವ ಎಲ್ಲ ಬೇಡಿಕೆಗಳನ್ನು ಪರಿಶೀಲನೆ ನಡೆಸುವುದಾಗಿ ಅವರು ಭರವಸೆ ನೀಡಿದರು.
ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರ ರಾಜೀನಾಮೆಯನ್ನು ವಾಪಸ್ ಪಡೆದಿರುವ ಅತ್ಯಂತ ಸಂತಸದ ವಿಚಾರವಾಗಿದೆ. ಇಂತಹ ಪ್ರಾಮಾಣಿಕ ಅಧಿಕಾರಿಗಳು ರಾಜ್ಯಕ್ಕೆ ಅವಶ್ಯವಾಗಿದೆ. ಹೀಗಾಗಿ ಸಂತೋಷ ಹೆಗ್ಡೆ ಅಂತಹ ದಿಟ್ಟ ಅಧಿಕಾರಿಗಳನ್ನು ಕಳೆದುಕೊಳ್ಳುವ ಮನಸ್ಸು ನಮಗಿಲ್ಲ. ಒಂದು ಮಾತು ಸತ್ಯ, ಲೋಕಾಯುಕ್ತ ಇಲಾಖೆಗೆ ಎಲ್ಲ ಸಹಾಯ, ಸಹಕಾರವನ್ನು ಸರಕಾರ ನೀಡಲಿದೆ ಎಂದು ಯಡಿಯೂರಪ್ಪ ಹೇಳಿದರು. ಜೊತೆಗೆ ಶೀಘ್ರವೇ ಉಪಲೋಕಾಯುಕ್ತರನ್ನು ನೇಮಕ ಮಾಡುವುದು ಅವರು ಹೇಳಿದರು.
ಕಳೆದ ಎಂಟು ದಿನಗಳಿಂದ ಲೋಕಾಯುಕ್ತ ರಾಜೀನಾಮೆ ಪ್ರಕರಣ ಸರಕಾರ ದೊಡ್ಡ ತಲೆನೋವಾಗಿದ್ದ ರಾಜೀನಾಮೆ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಂತಾಗಿದೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ನಿಟ್ಟುಸಿರು ಬಿಟ್ಟಿದೆ.
ಜೂನ್ 23ರಂದು ರಾಜೀನಾಮೆ ಘೋಷಿಸಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ರಾಜ್ಯಪಾಲರನ್ನು ಭೇಟಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಅಲ್ಲಿಂದ ಶುರುವಾಗಿದ್ದ ವಿವಾದ ವಿಧಾನಸೌಧದಲ್ಲಿ ಕಲಾಪವನ್ನು ನುಂಗಿ ಹಾಕಿತ್ತು. ಸಾರ್ವಜನಿಕ ವಲಯದಿಂದಲೂ ಸಾಕಷ್ಟು ಆಕ್ರೋಶ, ಅಸಮಾಧಾನ ವ್ಯಕ್ತವಾಗಿತ್ತು.
ಶುಕ್ರವಾರ ಸಚಿವರ ದಂಡು ಸಂತೋಷ ಹೆಗ್ಡೆ ನಿವಾಸಕ್ಕೆ ಭೇಟಿ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿಕೊಂಡಿತ್ತು. ಆದರೆ, ಪಟ್ಟು ಬಿಡದ ಅವರು ನನ್ನ ನಿರ್ಧಾರ ಅಚಲ ಎಂದು ಹೇಳಿದ್ದರು. ಇದರಿಂದ ಸರಕಾರ ಇಕ್ಕಟ್ಟಿಗೆ ಸಿಲುಕಿಕೊಂಡಿತ್ತು. ಸಂಕಷ್ಟದಿಂದ ಪಾರು ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತಿ ಅಡ್ವಾಣಿ ಮಧ್ಯೆ ಪ್ರವೇಶಿಸಿದ್ದರಿಂದ ಪ್ರಕರಣ ಕೊನೆಗೊಂಡಂತಾಗಿದೆ.











Click it and Unblock the Notifications