ನಿತ್ಯಾನಂದ ಸ್ವಾಮಿ ಮುಕ್ತ ಮುಕ್ತ ಮುಕ್ತ
ಬೆಂಗಳೂರು, ಜೂ.11: ಸ್ವಾಮಿ ನಿತ್ಯಾನಂದ ಹಾಗೂ ನಟಿ ರಂಜಿತಾ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮಹತ್ವ ತೀರ್ಪನ್ನು ನ್ಯಾ. ಸುಭಾಷ್ ಬಿ . ಆಡಿ ಅವರ ಏಕಸದಸ್ಯಪೀಠ ಇಂದು ಪ್ರಕಟಿಸಿದೆ. ಇದರಿಂದಾಗಿ 46 ದಿನಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದ ಸ್ವಾಮಿಗೆ ಶುಕ್ರವಾರ ಶುಭ ಶುಕ್ರವಾರವಾಗಿ ಪರಿಣಮಿಸಿ ಮುಕ್ತ ಮುಕ್ತ ಮುಕ್ತರಾಗಿದ್ದಾರೆ!
ಜಾಮೀನು ಕೋರಿ ನಿತ್ಯಾನಂದ ಅವರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ನಿತ್ಯಾನಂದನಿಗೆ ಷರತ್ತು ಬದ್ಧ ಜಾಮೀನು ಆದೇಶ ಹೊರಡಿಸಿದೆ. ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಎರಡು ಶ್ಯೂರಿಟಿಯನ್ನು ಜಾಮೀನು ಒಳಗೊಂಡಿರುತ್ತದೆ.
ಸಾಕ್ಷ್ಯಾಧಾರ ಕೊರತೆ: ನಿತ್ಯಾನಂದನ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಯಾರೊಬ್ಬರೂ ಸಾಕ್ಷಿ ಹೇಳಲು ಮುಂದೆ ಬಂದಿಲ್ಲ. ಸಿಐಡಿ ಕೂಡಾ ಸಾಕ್ಷ್ಮ ಒದಗಿಸಲು ವಿಫಲವಾಗಿತ್ತು. ಈ ಎಲ್ಲಾ ಕಾರಣಗಳಿಂದ ಏಕಸದಸ್ಯ ಪೀಠ ಇಂದು ಜಾಮೀನು ಮಂಜೂರು ಮಾಡಿದೆ ಎಂದು ನಿತ್ಯಾನಂದನ ಪರ ವಕೀಲ ಶ್ಯಾಮ್ ಸುಂದರ್ ಸುದ್ದಿಗಾರರಿಗೆ ಹೇಳಿದರು.
ನಿತ್ಯಾನಂದ ಜಾಮೀನು ಪಡೆಯಲು ಒಂದು ಲಕ್ಷ ರು ದಂಡ ಕಟ್ಟಬೇಕು. ಇಬ್ಬರು ವ್ಯಕ್ತಿಗಳು ಆತನ ಪರ ಸಹಿ ಹಾಕಬೇಕು. 15 ದಿನಗಳಿಗೊಮ್ಮೆ ಪೊಲೀಸ್ ಠಾಣೆಗೆ ಭೇಟಿ ನೀಡಿ, ಸಹಿ ಹಾಕಿ ಬರಬೇಕು. ದೇಶ ಬಿಟ್ಟು ಹೊರಹೋಗುವಂತಿಲ್ಲ ಎಂದು ಹೈಕೋರ್ಟ್ ನೀಡಿರುವ ಆದೇಶ ಪ್ರತಿಯಲ್ಲಿ ಹೇಳಲಾಗಿದೆ.
ತಕ್ಷಣ ಬಿಡುಗಡೆ ಕಷ್ಟ: ನಾಳೆ, ನಾಡಿದ್ದು ನ್ಯಾಯಾಲಯಕ್ಕೆ ರಜೆ ಇರುವುದರಿಂದ ಇನ್ನೆರಡು ದಿನಗಳ ಕಾಲ ನಿತ್ಯಾನಂದ ಜೈಲಿನಲ್ಲೇ ಕಳೆಯಬೇಕಾಗುತ್ತದೆ.ಹೈ ಕೋರ್ಟ್ ಆದೇಶದ ಪ್ರತಿ ಸಿಕ್ಕ ನಂತರ ರಾಮನಗರ ಕೋರ್ಟ್ ನಲ್ಲಿ ತೋರಿಸಿ ಬಿಡುಗಡೆ ಕೋರಿ ಅರ್ಜಿ ಹಾಕಬೇಕು. ಆಮೇಲೆ ಅಲ್ಲಿಂದ ಆದೇಶ ಪಡೆದು ಜೈಲಿಗೆ ಹೋಗಿ ಬಿಡಿಸಿಕೊಳ್ಳಬೇಕು ಎಂದು ಶ್ಯಾಮ್ ಸುಂದರ್ ಹೇಳಿದರು.
ನಿತ್ಯಾನಂದನ ಬಿಡುಗಡೆಗಾಗಿ ಶಿಷ್ಯವರ್ಗ ಉರುಳುಸೇವೆ, ಉಪವಾಸ, ಜಪ ತಪ, ಹೋಮ ಎಂದು ದಿನಕ್ಕೊಂದು ಪೂಜೆ[ಚಿತ್ರಗಳನ್ನು ವೀಕ್ಷಿಸಿ] ಸಲ್ಲಿಸುತ್ತಾ ದೇವರಿಗೆ ಮೊರೆಹೋಗಿದ್ದರು. ಸುಮಾರು 46 ದಿನಗಳಿಂದ ಜೈಲುವಾಸಿಯಾಗಿರುವ ನಿತ್ಯಾನಂದ ಮಾತ್ರ ಮಿತ ಆಹಾರ, ಸದಾ ಧ್ಯಾನದಲ್ಲಿ ತಲ್ಲೀನನಾಗಿ ಸದಾ ಹಸನ್ಮುಖಿಯಾಗಿ ಕಾಣಿಸಿಕೊಂಡಿದ್ದಾನೆ.












Click it and Unblock the Notifications