ಕುಮ್ಮಿ ಮಂತ್ರಿ ಆಗೋಲ್ವಂತೆ,ಈಗ ಗೌಡ್ರು ನಗಲಿಲ್ಲ
ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಬಗ್ಗೆ ಕಾಂಗ್ರೆಸ್ ನ ಹಿರಿಯ ನಾಯಕರೊಡನೆ ಮಾತುಕತೆ ನಡೆಸಲು ದೆಹಲಿಗೆ ಹೋಗಿದ್ದೆ. ದೆಹಲಿಗೆ ಹೋದ್ರೆ ಸಾಕು ಮಂತ್ರಿ ಆಗೋಕೆ ಅಪ್ಲಿಕೇಷನ್ ಹಿಡ್ಕೊಂಡು ಹೋಗ್ತಾ ಇದ್ದಾರೆ ಅಂತಾ ಬರೆದು ಬಿಡ್ತೀರಿ ಪೇಪರ್ ನಲ್ಲಿ ಏನ್ಮಾಡೋದು ಎಂದು ಪತ್ರಕರ್ತರನ್ನೇ ಕುಮಾರಣ್ಣ ಪ್ರಶ್ನಿಸಿಬಿಟ್ಟರು.
ದೆಹಲಿ ಹಾಗೂ ಬೆಂಗಳೂರಲ್ಲಿ ಇನ್ನು ಒಂದೆರಡು ಸುತ್ತು ಮಾತುಕತೆ ಆದ ಮೇಲೆ ವಿಧಾನ ಪರಿಷತ್ ಚುನಾವಣೆ ಮೈತ್ರಿ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು. ಮೂಲಗಳ ಪ್ರಕಾರ ಕಾಂಗ್ರೆಸ್ ಗೆ ರಾಜ್ಯ ಸಭೆ ಹಾಗೂ ಪರಿಷತ್ ಸ್ಥಾನ ಬಿಟ್ಟು ಕೊಟ್ಟರೆ ಕುಮಾರಸ್ವಾಮಿಗೆ ಮಂತ್ರಿಗಿರಿ ಗ್ಯಾರಂಟಿ ಎನ್ನಲಾಗಿದೆ.
ಗ್ರಾಮವಾಸ್ತವ್ಯ ಆಯ್ತು, ಈಗ ಪಾದಯಾತ್ರೆ: ಆಂಧ್ರದ ದಿವಂಗತ ಸಿಎಂ ವೈಎಸ್ ಆರ್ ಅವರಂತೆ ಪಾದಯಾತ್ರೆ ಮಾಡುವ ಹುಕ್ಕಿ ಕುಮಾರಣ್ಣನಿಗೆ ಹುಟ್ಟಿ ಬಿಟ್ಟಿದೆ. ಬಸವಕಲ್ಯಾಣದಿಂದ ಆರಂಭಿಸಿ ರಾಜ್ಯದೆಲ್ಲೆಡೆ ಪಾದಯಾತ್ರೆ ಮಾಡುವ ಮೂಲಕ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಬೆತ್ತೆಲೆಗೊಳಿಸಿ, ಜನ ಜಾಗೃತಿ ಮೂಡಿಸುತ್ತೇವೆ.
ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ. ಗ್ರಾಮ ಮಟ್ಟದಿಂದ ಜನತೆ ಮೂಲ ಸೌಕರ್ಯ ವಂಚಿತರಾಗುವಂತೆ ಮಾಡಿರುವುದು ಬಿಜೆಪಿ ಸರ್ಕಾರದ ಸಾಧನೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರ ಸ್ವಾಮಿ ಗುಟುರು ಹಾಕಿದರು.