ಜನಗಣತಿಯಲ್ಲಿ ಜಾತಿ ಬೇಕೆ? ಬೇಡವೆ?
ನವದೆಹಲಿ, ಮೇ 27 : ಜನಗಣತಿಯಲ್ಲಿ ಜಾತಿಯನ್ನು ಸೇರಿಸಬೇಕೆ ಬೇಡವೆ ಎಂಬ ಬಗ್ಗೆ ರಾಜಕೀಯ ಪಂಗಡಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳಲು ಕೇಂದ್ರ ಸಂಪುಟ ಗುರುವಾರ ಸಂಜೆ ಸಭೆ ಸೇರುತ್ತಿದೆ.
ಜಾತ್ಯತೀತ ಪಕ್ಷವೆಂದು ಸಾರಿಕೊಳ್ಳುವ ಕಾಂಗ್ರೆಸ್ ಹಿಂದುಳಿದ ಜಾತಿಗೆ ಸೇರಿದ ನಾಯಕರುಗಳಾದ ಮುಲಾಯಂ ಸಿಂಗ್ ಯಾದವ್, ಲಾಲೂ ಪ್ರಸಾದ್ ಯಾದವ್, ಶರದ್ ಯಾದವ್ ಅವರುಗಳ ಬೆಂಬಲವನ್ನು ಸಂಸತ್ತಿನಲ್ಲಿ ಗಟ್ಟಿಗೊಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಜಾತಿಯನ್ನು ಜನಗಣತಿಯಲ್ಲಿ ತರಲಾಗುತ್ತಿದೆ ಎಂದು ರಾಜಕೀಯ ವಲಯದಲ್ಲಿ ಗುಲ್ಲೆದ್ದಿದೆ.
ಜನಗಣತಿಯಲ್ಲಿ ಜಾತಿಯನ್ನು ತರಬೇಕೆಂದು ಪಟ್ಟು ಹಿಡಿದವರೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ. ಈ ವಿಷಯವನ್ನು ಮೊದಲ ಬಾರಿ ಪ್ರಧಾನಿ ಮನಮೋಹನ ಸಿಂಗ್ ಪ್ರಸ್ತಾಪಿಸಿದ್ದಾಗ ಗೃಹ ಸಚಿವ ಪಿ ಚಿದಂಬರಂ ಸೇರಿದಂತೆ ಕೆಲ ಯುಪಿಎ ಅಂಗ ಪಕ್ಷಗಳ ಸದಸ್ಯರಿಂದ ವಿರೋಧ ವ್ಯಕ್ತವಾಗಿತ್ತು.
ಜನಗಣತಿಯಲ್ಲಿ ಜಾತಿಯನ್ನು ಸೇರಿಸಬೇಕೆಂಬ ಪ್ರಸ್ತಾಪಕ್ಕೆ ಬಿಜೆಪಿ ಅನುಮೋದನೆ ನೀಡಿದ್ದರೂ ಆರ್ಎಸ್ಎಸ್ ಗದರಿಯಿಂದ ಈಗ ಹಿಂದೇಟು ಹಾಕುತ್ತಿದೆ. ಸಮಾಜದಲ್ಲಿ ಸಮತೋಲನ ತರುವ ಬದಲು ಜಾತಿಯಿಂದ ಸಮಾಜವನ್ನು ಒಡೆಯಲಾಗುತ್ತಿದೆ ಎಂದು ಹುಯಿಲೆಬ್ಬಿಸಿದೆ. ಆದರೆ, ಜಾತಿ ವಿಷಯದಲ್ಲಿ ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳುವ ಬದಲು ಸರ್ವಪಕ್ಷಗಳ ಸಮ್ಮತಿಯಿಂದ ಮುಂದುವರಿಯಬೇಕೆಂದು ಕಾಂಗ್ರೆಸ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಇಂದಿನ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ.
ಜಾತಿ ಆಧಾರಿತ ಜನಗಣತಿ : 1931ರಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಕಳೆದ ಬಾರಿ ಜಾತಿ ಆಧಾರಿತ ಜನಗಣತಿ ಮಾಡಲಾಗಿತ್ತು. ತದನಂತರ ಜಾತಿ ಆಧಾರಿತ ಜನಗಣತಿ ಆಗೇ ಇಲ್ಲ. ಈ ಸಮಯದಲ್ಲಿ ಜಾತಿ ಪಟ್ಟಿಯಲ್ಲಿ ಅನೇಕ ಪಂಗಡಗಳು ಸೇರಿಕೊಂಡಿವೆ, ಹಲವು ಕಳಚಿಕೊಂಡಿವೆ. ಹೀಗಾಗಿ ಜಾತಿಗಳ ಲೆಕ್ಕಾಚಾರ ದೇಶದಲ್ಲಿ ಅಸ್ಪಷ್ಟವಾಗಿ ಉಳಿದಿದೆ.
ಆದರೆ, ಈ ವಿಷಯ ಅತ್ಯಂತ ಸೂಕ್ಷ್ಮವಾಗಿದ್ದರಿಂದ 'ಜಾತಿ'ಯನ್ನು ಮುಟ್ಟಲು ರಾಜಕೀಯ ಪಕ್ಷಗಳು ಹಿಂದೇಟು ಹಾಕುತ್ತಿವೆ. ಜನಗಣತಿಯಲ್ಲಿ ಜಾತಿ ಇರಬೇಕೆ ಬೇಡವೆ ಎಂಬ ಬಗ್ಗೆ ನಮ್ಮ ಓದುಗರು ಏನು ಹೇಳುತ್ತಾರೋ ನೋಡೋಣ.