ರಾಜ್ಯಪಾಲರ ನೋಟಿಸ್ : ಮುಗಿಯದ ರಗಳೆ

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ರಾಜ್ಯಪಾಲರಿಗೆ ನೋಟಿಸ್ ನೀಡುವ ಅಧಿಕಾರ ಇದೆ. ಸಚಿವ ಜನಾರ್ದನ ರೆಡ್ಡಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅವರು ಮೊದಲು ಕಾನೂನನ್ನು ಅರಿಯಲು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಂಡಿರುವುದು ಸರಿಯಲ್ಲ. ಚುನಾವಣೆಗೆ ಸಂಬಂಧಪಟ್ಟ ಮೊಕದ್ದಮೆಗಳನ್ನು ವಾಪಸ್ಸು ಪಡೆಯುವ ಅಧಿಕಾರ ಸರಕಾರಕ್ಕಿಲ್ಲ ಎಂದು ಸಿದ್ದು ರಾಜ್ಯಪಾಲರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ರಾಜ್ಯಪಾಲರ ಅಧಿಕಾರವನ್ನೇ ಪ್ರಶ್ನಿಸುವ ಮೂಲಕ ಜನಾರ್ದನ ರೆಡ್ಡಿ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಈ ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. ರಾಜ್ಯಪಾಲರನ್ನು ನಿಂದಿಸಿರುವ ರೆಡ್ಡಿಯ ನಿಯಂತ್ರಣ ಸಾಧ್ಯವಿಲ್ಲ ಎನ್ನುವುದಾದರೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ತೆರಳಲಿ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು. ಬುಧವಾರ ದೇವೇಗೌಡ, ಸಿದ್ಧರಾಮಯ್ಯ, ಎಂಪಿ ಪ್ರಕಾಶ, ಕೆ ಸಿ ಕೊಂಡಯ್ಯ ರಾಜ್ಯಪಾಲರನ್ನು ಭೇಟಿ ಚರ್ಚೆ ನಡೆಸಿದ್ದರು. ಇಂದು ರಾಜ್ಯಪಾಲರು ದಿಢೀರಂತ ದೆಹಲಿಯ ಪ್ರವಾಸ ಕೈಗೊಂಡಿದ್ದಾರೆ.
ಗ್ರಾಪಂ ಚುನಾವಣೆಯಲ್ಲಿ ಕೈ ಮೇಲು
ಇತ್ತೀಚೆಗೆ ಮುಕ್ತಾಯಗೊಂಡ ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಗಳಿಸಿದೆ ಎಂದು ಸಿದ್ಧರಾಮಯ್ಯ ಹೇಳಿದರು. ಬಿಜೆಪಿಯ ರೈತ, ಜನವಿರೋಧಿ ಆಡಳಿತದಿಂದ ಬೇಸತ್ತ ಜನತೆ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ರಾಜ್ಯದ 5,800 ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ರಾಜ್ಯಾದ್ಯಂತ ಬಿಜೆಪಿ ವಿರೋಧಿ ಗಾಳಿ ಬೀಸುತ್ತಿರುವುದಕ್ಕೆ ಇದೇ ಸ್ಪಷ್ಟ ನಿದರ್ಶನ ಎಂದು ಸಿದ್ಧು ಸಮರ್ಥಿಸಿಕೊಂಡರು.
ಉತ್ತರ ಕರ್ನಾಟದಲ್ಲಿ ನೆರಸಂತ್ರಸ್ಥರಿಗಾಗಿ ಸರಕಾರ ನೂರಾರು ಕೋಟಿ ರುಪಾಯಿಗಳನ್ನು ವಶೀಲಿ ಮಾಡಿದೆ. ಆ ಹಣ ಎಲ್ಲಿ ಹೋಯಿತು. ಸಂತ್ರಸ್ಥರಿಗೆ ಮನೆಯೂ ಇಲ್ಲ, ಖಜಾನೆಯಲ್ಲಿ ದುಡ್ಡೂ ಇಲ್ಲ. ಹಾಗಾದ್ರೆ ಹಣ ಎಲ್ಲಿ ಹೋಯಿತು. ಬೊಕ್ಕಸದಲ್ಲಿರುವ ಹಣವನ್ನು ಸರಕಾರ ಚುನಾವಣೆಗೆ ಪೋಲು ಮಾಡಿದೆ ಎಂದು ಸಿದ್ಧರಾಮಯ್ಯ ಗಂಭೀರ ಅಪಾದನೆ ಮಾಡಿದರು.












Click it and Unblock the Notifications