ಕೋಡಂಗಿ ಗಿರಿಜನರಿಗೆ 'ಮರವೇ' ಮನೆ

ಇವರು ವರ್ಷದ ಹೆಚ್ಚಿನ ದಿನಗಳನ್ನು ಮರದಲ್ಲಿ ಮಲಗಿ ಕಳೆಯುತ್ತಾರೆ. ಹಾಗೆಂದು ಮರದಲ್ಲಿ ಮಲಗುವುದು ಇವರ ಸಂಪ್ರದಾಯವಲ್ಲ. ಇದು ನಮ್ಮ ತುಕ್ಕು ಹಿಡಿದ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಕೋಡಂಗಿ ಹಾಡಿಯ ಗಿರಿಜನರಿಗೆ ಸದಾ ಕಾಡಾನೆ ದಾಳಿಯ ಭಯ. ರಾತ್ರಿ ವೇಳೆಯಲ್ಲಿ ದಾಳಿಯಿಡುವ ಕಾಡಾನೆಗಳು ತಾವು ವಾಸಿಸುವ ಗುಡಿಸಲುಗಳನ್ನು ನಾಶ ಮಾಡುತ್ತವೆ. ಮತ್ತೆ ಮಾರನೆಯ ದಿನ ಗುಡಿಸಲು ನಿರ್ಮಿಸಿಕೊಳ್ಳುವುದು ಇವರಿಗೆ ಮಾಮೂಲಿಯಾಗಿದೆ. ಗುಡಿಸಲು ನಾಶವಾದರೆ ಮತ್ತೆ ನಿರ್ಮಿಸಿಕೊಳ್ಳಬಹುದು ಆದರೆ ದಾಳಿ ಮಾಡಿ ಪ್ರಾಣ ತೆಗೆದರೆ ಮತ್ತೆ ತರಲು ಸಾಧ್ಯನಾ? ಎಂದು ಪ್ರಶ್ನಿಸುವ ಇಲ್ಲಿನ ಮಂದಿ ಪ್ರಾಣ ರಕ್ಷಣೆಗೋಸ್ಕರ ರಾತ್ರಿ ಮರವೇರಿ ಮಲಗುತ್ತೇವೆ ಎಂಬ ಅಸಹಾಯಕ ನುಡಿಯಾಡುತ್ತಾರೆ.
ಕೋಡಂಗಿ ಹಾಡಿಯ ಗಿರಿಜನರದ್ದು ಇದು ಇಂದು ನಿನ್ನೆಯ ಗೋಳಲ್ಲ. ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಹಾಡಿಗೆ ಸರ್ಕಾರದ ಯಾವುದೇ ಮೂಲಭೂತ ಸೌಕರ್ಯ ತಲುಪಿಲ್ಲ. ಹಾಗಾಗಿ ಒಂದು ಕೊಡ ನೀರು ಬೇಕಾದರೂ ಕಿಲೋಮೀಟರ್ಗಟ್ಟಲೆ ನಡೆಯಬೇಕು. ತಲತಲಾಂತರದಿಂದ ನೆಲೆಸಿರುವ ಈ ಹಾಡಿಯನ್ನು ಬಿಟ್ಟು ಬೇರೆ ಕಡೆ ನೆಲೆಸಲು ಇಲ್ಲಿಯ ಮಂದಿ ತಯಾರಿಲ್ಲ. ಇಲ್ಲಿಗೆ ಸೌಲಭ್ಯ ಒದಗಿಸಲು ನಮ್ಮ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ ಹೀಗಾಗಿ ಈ ಹಾಡಿಯ ಗಿರಿಜನರ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ.
ನಾಗರಹೊಳೆ ಅರಣ್ಯದಲ್ಲಿ ಆಹಾರ ಸಮಸ್ಯೆ ಇರುವುದರಿಂದ ಕಾಡಾನೆಗಳು ಆಹಾರ ಅರಸುತ್ತಾ ನಾಡಿನತ್ತ ಬರತೊಡಗಿದ್ದು, ಹೀಗೆ ಬರುವ ಕಾಡಾನೆಗಳು ಕೋಡಂಗಿ ಹಾಡಿಯತ್ತ ನುಗ್ಗಿ ದಾಳಿ ಮಾಡುತ್ತವೆ. ಸಾಮಾನ್ಯವಾಗಿ ರಾತ್ರಿ ಹೊತ್ತಲ್ಲೇ ದಾಳಿ ಮಾಡುವುದರಿಂದ ಸಂಜೆಯೇ ರಾತ್ರಿಯ ಊಟ ಮುಗಿಸಿಕೊಂಡು ವೃದ್ಧರು, ಮಕ್ಕಳು ಪಕ್ಕದ ಹಾಡಿಗೆ ಹೋದರೆ, ಉಳಿದವರು ಮರಹತ್ತಿ ಮಲಗುತ್ತಾರೆ. ಇವರ ಗೋಳು ನೋಡಿದರೆ ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಕವನ ನೆನಪಾಗುತ್ತದೆ.











Click it and Unblock the Notifications