ಸ್ಸಾರಿ, ಶ್ರೀನಿವಾಸಪುರ ಮಾವು ಬಂದಿಲ್ಲರೀ. ..
ಮಾವಿನ ಫಸಲನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ರೈತ ಕುಟುಂಬಗಳ ಬದುಕು ಈ ಬಾರಿಯ ಕಡಿಮೆ ಫಸಲಿನಿಂದ ದುಸ್ಥರವಾಗಲಿದೆ. ಮಾವಿನ ಮರಗಳಲ್ಲಿ ಮಾರ್ಚ್ ವೇಳೆಗೆ ಹೂವುಬಿಡಬೇಕಾಗಿದ್ದು, ಬಿಸಿಲಿನ ಕೊರತೆಯಿಂದಾಗಿ ಈ ವರ್ಷ ನಿಧಾನವಾಗಿ ಹೂ ಬಿಟ್ಟಿತು. ನಂತರದ ದಿನಗಳಲ್ಲಿ ಕಂಡುಬಂದ ಬಿಸಿಲಿನ ಝಳಕ್ಕೆ ಪಿಂದಿಕಟ್ಟಿದ ಹೂಗಳು ಉದರತೊಡಗಿದವು. ಸುಮಾರು ಅರ್ಧದಷ್ಟು ಮರಗಳು ಹೂ ಬಿಡದೆ ಚಿಗರು ಬಂದುದರಿಂದ ಮೊದಲೇ ರೈತನಿಗೆ ಕಡಿಮೆ ಫಸಲಿನ ಮುನ್ಸೂಚನೆ ನೀಡಿತ್ತು.
ಉಳಿದ ಅಲ್ಪ ಸ್ವಲ್ಪ ಕಾಯಿಗಳು ಎರೆಡು-ಮೂರು ಬಾರಿ ಬಿದ್ದ ಆಲಿಕಲ್ಲು ಮಳೆ ಮತ್ತು ಬಿರುಗಾಳಿ ಮಳೆಗೆ ಸಂಪೂರ್ಣವಾಗಿ ನೆಲ ಕಚ್ಚಿದವು. ಶ್ರೀನಿವಾಸಪುರದ ಮಾವಿನ ಹಣ್ಣು ದೇಶದೆಲ್ಲೆಡೆ ಪ್ರಸಿದ್ಧಿಯಾಗಿದ್ದು ಸೂಕ್ತ ಮಾರುಕಟ್ಟೆಯಿಲ್ಲದೆ ರೈತರು ನಷ್ಟವನ್ನು ಅನುಭಸುತ್ತಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಇದೆಯಾದರೂ ಅದು ಕೇವಲ ದಲ್ಲಾಳಿಗಳ ಪರವಾಗಿ ಕೆಲಸ ಮಾಡುವ ಸಮಿತಿಯಾಗಿದ್ದು ರೈತರಿಗೆ ಆಸರೆಯಾಗಿ ನಿಲ್ಲುವ ಸಂಸ್ಥೆಯಾಗಿ ಉಳಿದಿಲ್ಲ ಎಂದು ತಾಲೂಕು ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಕೊಳ್ತೂರು ಬಾಲಚಂದ್ರ ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳು ತಾಲೂಕಿನಲ್ಲಿ ಹಣ್ಣು ಸಂಸ್ಕರಣ ಘಟಕ ಸ್ಥಾಪಿಸಲಾಗುತ್ತದೆ ಎಂದು ಘೋಷಿಸಿದ್ದರೂ ಇದುವರೆಗೆ ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾರ್ಯಗಳು ಪ್ರಗತಿಯಲ್ಲಿಲ್ಲ. ಆದಷ್ಟು ಶೀಘ್ರವಾಗಿ ಘಟಕ ಸ್ಥಾಪನೆಯಾದರೆ ರೈತರಿಗೆ ತುಂಬಾ ಅನುಕೂಲವಾಗಿಲಿದ್ದು, ರೈತರ ಸಂಕಷ್ಟ ಪಾರಾದಂತಾಗುತ್ತದೆ ಎಂದು ತಿಳಿಸಿದರು.