ತೈಲ ಬೆಲೆ ನಿಗದಿ ಸರ್ಕಾರದ ಅಧಿಕಾರ
ದರಗಳ ನಿಗದಿ ಹಾಗೂ ರಾಷ್ಟ್ರೀಯ ಆಸ್ತಿಯ ಹಂಚಿಕೆಯಲ್ಲಿ ಸರ್ಕಾರದ ತೀರ್ಮಾನವೇ ಅಂತಿಮ ಎಂದು ಹೇಳಿದೆ. ನಾಲ್ಕು ವರ್ಷ ಹಳೆಯದಾದ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆಜಿ ಬಾಲಕೃಷ್ಣನ್ ಅವರಿದ್ದ ವಿಭಾಗೀಯ ಪೀಠ ಎರಡೂ ಸಮೂಹದ ನಡುವೆ ಆಗಿರುವ ಒಪ್ಪಂದ ಕಾನೂನಿನ ಮತ್ತು ತಾಂತ್ರಿಕವಾಗಿ ಕಡ್ಡಾಯವೇನಲ್ಲ ಎಂದು ಹೇಳಿದೆ.
ಕುಸಿದ RNRL ಷೇರುಗಳು : ತೀರ್ಪು ಪ್ರಕಟಣೆಯ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದ ಅನಿಲ್ ಅಂಬಾನಿ ಅವರು ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸದೆ ಹೊರಟು ಹೋದರು. ತೀರ್ಪು ಹೊರಬಿದ್ದ ಕೂಡಲೇ ಷೇರು ಮಾರುಕಟ್ಟೆಯಲ್ಲಿ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ನ ಷೇರುಗಳು ಶೇ.5 ರಷ್ಟು ಏರಿಕೆ ದಾಖಲಿಸಿ 1050 ರುಪಾಯಿಗಳನ್ನು ತಲುಪಿದರೆ, ಅನಿಲ್ ಸಮೂಹದ ರಿಲಯನ್ಸ್ ನ್ಯಾಚುರಲ್ ರಿಸೋರ್ಸಸ್ ಲಿಮಿಟೆಡ್(RNRL) ನ ಷೇರುಗಳು ಶೇ 20 ಕುಸಿತ ದಾಖಲಿಸಿ ರು.55 ಕ್ಕೆ ಕುಸಿಯಿತು.
ತೀರ್ಪನ್ನು ಓದಿದ ನ್ಯಾಯಮೂರ್ತಿ ಪಿ ಸದಾಶಿವಮ್ ಅವರು, ಅನಿಲದ ಮೇಲೆ ರಿಲಯನ್ಸ್ ಗೆ ಸಂಪೂರ್ಣ ಹಕ್ಕಿಲ್ಲ ಎಂದು ಹೇಳಿದರಲ್ಲದೆ, ಬೆಲೆ ನಿಗದಿ ಸರ್ಕಾರದ ಅಧಿಕಾರ ಎಂದರು. ಎರಡೂ ಕಂಪೆನಿಗಳ ನಡುವೆ ಅನಿಲ ಹಂಚಿಕೆ ಕುರಿತು ಆಗಿರುವ ಒಪ್ಪಂದವನ್ನು ಬಹಿರಂಗಪಡಿಸಿಲ್ಲದಿರುವ ಹಿನ್ನೆಲೆಯಲ್ಲಿ ಸರ್ಕಾರ ಬೆಲೆ ನಿಗದಿ ಮಾಡಬೇಕು ಎಂದರು. ತೀರ್ಪನ್ನು ಸರ್ಕಾರ ಸ್ವಾಗತಿಸಿದ್ದು ಅನಿಲ ಉಪಯೋಗ ಹಾಗೂ ದರ ನಿಗದಿ ಕುರಿತು ಸರ್ಕಾರದ ಪರಮಾಧಿಕಾರವನ್ನು ಕೋರ್ಟು ಎತ್ತಿ ಹಿಡಿದಿದೆ ಎಂದಿದೆ.
ತೈಲ ಸಚಿವ ಹರ್ಷ: ಮುಖೇಶ್ ಅಂಬಾನಿಗೆ ಸರ್ಕಾರ ಸಹಾಯ ಮಾಡುತ್ತಿದೆ ಎಂದು ಈ ಹಿಂದೆ ಆರೋಪಕ್ಕೆ ಈಗ ಉತ್ತರ ಸಿಕ್ಕಿದೆ ಎಂದ ತೈಲ ಸಚಿವ ಮುರಳಿ ಡಿಯೋರಾ ಅವರು ಹೇಳಿದರು. ಕೋರ್ಟು ರಿಲಯನ್ಸ್ ಮುಂದಿನ ಆರು ವಾರಗಳಲ್ಲಿ ರಿಲಯನ್ಸ್ ನ್ಯಾಚುರಲ್ ರಿಸೋರ್ಸಸ್ ಜತೆ ಸರ್ಕಾರದ ನಿಯಮಾವಳಿ ಅನ್ವಯ ಅನಿಲ ಮಾರಾಟ ಒಪ್ಪಂದವನ್ನು ಮಾಡಿಕೊಳ್ಳುವಂತೆ ಆದೇಶಿಸಿದೆ.
ಆರ್ಎನ್ಆರ್ಎಲ್ ರಿಲಯನ್ಸ್ ನ ಕೃಷ್ಣ ಗೋದಾವರಿ ಕಣಿವೆ ಅನಿಲ ನಿಕ್ಷೇಪದಲ್ಲಿ ಪ್ರತಿನಿತ್ಯ 28 ಮಿಲಿಯ ಘನ ಮೀಟರ್ ಗಳಷ್ಟು ಅನಿಲವನ್ನು ಪ್ರತಿ ಮಿಲಿಯ ಬ್ರಿಟಿಷ್ ಥರ್ಮಲ್ ಯೂನಿಟ್ ಗೆ 2.34 ಡಾಲರ್ ದರದಂತೆ ತನಗೆ ನೀಡಬೇಕೆಂದು ಆದೇಶ ಕೋರಿತ್ತು. ಸರ್ಕಾರ ಈ ಹಿಂದೆ 4.40 ಡಾಲರ್ ನಂತೆ ದರ ನಿಗದಿ ಪಡಿಸಿದ್ದು ಇದು ಆರ್ಎನ್ಆರ್ಎಲ್ ನ ಬೇಡಿಕೆಗಿಂತ ಶೇ.44 ರಷ್ಟು ಕಡಿಮೆಯಾಗಿದೆ.