26/11 : ಎಲ್ಲರ ಕಣ್ಣು ಶಿಕ್ಷೆ ಪ್ರಮಾಣದ ಮೇಲೆ

ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಮತ್ತು ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಸಲಸ್ಕರ್ ಹತ್ಯೆ ಸೇರಿದಂತೆ 86 ಆರೋಪಗಳಲ್ಲಿ ಅಪರಾಧಿ ಎಂದು ಪರಿಗಣಿತನಾಗಿರುವ ಕಸಬ್ ನನ್ನು ಗಲ್ಲಿಗೇರಿಸಬೇಕೆಂದು ಇಡೀ ರಾಷ್ಟ್ರ ಒಕ್ಕೊರಲಿನಿಂದ ಕೂಗುತ್ತಿದೆ. ಸತತ ಮೂರು ತಾಸುಗಳ ಕಾಲ 1,522 ಪುಟಗಳ ತೀರ್ಪನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಲ್ಎಲ್ ತಹಲ್ಯಾನಿ ಓದಿ ಮುಗಿಸುತ್ತಿದ್ದಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ಮುಖದಲ್ಲಿ ಸಂತಸ ಮೂಡಿತ್ತು.
ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದವರಲ್ಲಿ ಸಿಕ್ಕವನು ಕಸಬ್ ಒಬ್ಬನೇ. ಆದರೆ ದಾಳಿ ಮಾಡಬೇಕಾದ ಸ್ಥಳಗಳ ನಕಾಶೆಯನ್ನು ರೂಪಿಸಿ ಲಷ್ಕರ್-ಇ-ತೊಯ್ಬಾಗೆ ಹಸ್ತಾಂತರಿಸಿದ ಆರೋಪದ ಮೇಲೆ ಬಂಧಿತರಾಗಿದ್ದ ಅನ್ಸಾರಿ ಮತ್ತು ಅಹ್ಮದ್ ನನ್ನು ನ್ಯಾಯಾಧೀಶರು ಬಿಡುಗಡೆ ಮಾಡಿದ್ದಾರೆ. ಈ ಇಬ್ಬರು ಖುಲಾಸೆಯಾಗಿದ್ದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಉಜ್ವಲ್ ನಿಕ್ಕಂ ಹೇಳಿದ್ದಾರೆ. ವಿಚಾರಣೆ ಸಮಯದಲ್ಲಿ ನಿಕ್ಕಂ ಕೂಡ ಕಸಬ್ ನನ್ನು ಗಲ್ಲಿಗೇರಿಸಬೇಕೆಂದು ಮನವಿ ಮಾಡಿದ್ದರು.
ಲಷ್ಕರ್-ಇ-ತೊಯ್ಬಾದ ಹಫೀಜ್ ಸಯೀದ್, ಝಾಕಿರ್ ಉರ್ ರೆಹಮಾನ್ ಲಕ್ವಿ ಮತ್ತು ಅಬು ಹಂಜಾ ಕೂಡ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಈ ಮೂವರು ಬೇಕಾದ ಅಪರಾಧಿಗಳ ಪಟ್ಟಿಯಲ್ಲಿದ್ದಾರೆ.
ಈ ದಾಳಿ ಅತ್ಯಂತ ಸರಳವಾದ ದಾಳಿಯಾಗಿರಲಿಲ್ಲ. ಭಾರತದ ಸಾರ್ವಭೌಮತ್ವದ ಮೇಲೆ ಶತ್ರುಗಳು ಹೂಡಿದ ಯುದ್ಧ. ಇದನ್ನು ಸಾಧಾರಣ ಅಪರಾಧಿಗಳು ಮಾಡಲು ಸಾಧ್ಯವಿಲ್ಲ. ಇದು ಅತ್ಯಂತ ಚತುರತೆಯಿಂದ ಸಂಘಟಿಸಿದ ಯುದ್ಧ ಎಂದು ನ್ಯಾಯಾಧೀಶ ತೀರ್ಪಿನಲ್ಲಿ ತಿಳಿಸಿದ್ದಾರೆ. ಮುಂಬೈ ಮೇಲೆ ದಾಳಿ ನಡೆಸಿದ ಹತ್ತು ಜನರಲ್ಲಿ ಬಂಧಿತನಾಗಿರುವ ಕಸಬ್ ವಿರುದ್ಧದ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶ ಮಂಗಳವಾರ ಪ್ರಕಟಿಸಲಿದ್ದಾರೆ.
ಅತ್ಯಂತ ಸುಸಜ್ಜಿತರಾಗಿ ಪಾಕಿಸ್ತಾನದಿಂದ ಸಮುದ್ರಮಾರ್ಗವಾಗಿ ಆಗಮಿಸಿದ ಉಗ್ರರು ಕಾಮಾ ಆಸ್ಪತ್ರೆ, ಛತ್ರಪತಿ ಶಿವಾಜಿ ಟರ್ಮಿನಸ್, ನಾರಿಮನ್ ಪಾಯಿಂಟ್, ಟ್ರೈಡೆಂಟ್ ಹೊಟೇಲ್ ಮತ್ತು ತಾಜ್ ಹೊಟೇಲ್ ನಲ್ಲಿ ನಡೆದಿಸ ಹತ್ಯಾಕಾಂಡದಲ್ಲಿ ಒಟ್ಟು 166 ಜನರನ್ನು ಹತ್ಯೆಗೈದಿದ್ದರು. ನಂತರ 60 ಗಂಟೆಗಳ ಕಾಲ ನಡೆದ ಪ್ರತಿದಾಳಿಯಲ್ಲಿ 9 ಉಗ್ರರು ಹತ್ಯೆಗೀಡಾಗಿ ಕಸಬ್ ಒಬ್ಬನೇ ಜೀವಂತ ಸಿಕ್ಕುಬಿದ್ದಿದ್ದ.
ಪಾಕ್ ಗೆ ಚಿದಂಬರಂ ಎಚ್ಚರಿಕೆ : ಮುಂಬೈ ದಾಳಿಗೆ ಸಂಬಂಧಿಸಿದಂತೆ ಇಂದು ಪ್ರಕಟಿಸಲಾಗಿರುವ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಪಿ ಚಿದಂಬರಂ, ಈ ತೀರ್ಪು ಪಾಕಿಸ್ತಾನಕ್ಕೆ ಭಾರತ ನೀಡಿರುವ ಎಚ್ಚರಿಕೆಯ ಗಂಟೆ ಎಂದು ಹೇಳಿದ್ದಾರೆ. ಭಾರತಕ್ಕೆ ಮುಂದೆಯೂ ಉಗ್ರರನ್ನು ಪಾಕಿಸ್ತಾನ ಕಳಿಸಿದರೆ ಅತ್ಯಂತ ಉಗ್ರವಾಗಿ ಶಿಕ್ಷಿಸಲಾಗುವುದು ಎಂದು ಎಚ್ಚರಿಸಿದ್ದಾರೆ.











Click it and Unblock the Notifications