ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಬ್ ತಪ್ಪಿತಸ್ಥ: ವಿಶೇಷ ಕೋರ್ಟ್ ತೀರ್ಪು

By Mrutyunjaya Kalmat
|
Google Oneindia Kannada News

Ajmal Amir Kasab
ಮುಂಬೈ, ಮೇ. 3 : 2008 ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭೀಕರ ಹತ್ಯಾಕಾಂಡದಲ್ಲಿ ಸಿಕ್ಕ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಅಪರಾಧ ಎಸಗಿದ್ದಾನೆ ಎಂದು ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಏಳು ಜನರನ್ನು ಹತ್ಯೆ ಮಾಡಿದ ಮತ್ತು ರಾಷ್ಟ್ರದ ವಿರುದ್ಧ ಯುದ್ಧ ಸಾರಿದ ಆರೋಪವನ್ನು ಆತ ಎದುರಿಸುತ್ತಿದ್ದಾನೆ. ಶಿಕ್ಷೆಯ ಪ್ರಮಾಣವನ್ನು ಮಂಗಳವಾರ ವಿಶೇಷ ನ್ಯಾಯಾಲಯ ತಿಳಿಸಲಿದೆ.

ಆದರೆ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಭಾರತೀಯ ಮೂಲದ ಫಾಹೀಮ್ ಅನ್ಸಾರಿ ಮತ್ತು ಸಬಾವುದ್ಧೀನ್ ಅವರನ್ನು ಸೂಕ್ತ ಸಾಕ್ಷ್ಯ ಸಿಗದ ಕಾರಣ ನ್ಯಾಯಾಲಯ ಖುಲಾಸೆಗೊಳಿಸಿದೆ.

ಮುಂಬೈಯ ಅರ್ಥರ್ ರಸ್ತೆಯ ಜೈಲಿನಲ್ಲಿರುವ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ಕುರಿತು ತೀರ್ಪು ನೀಡಿದ ನ್ಯಾಯಾಧೀಶ ಎಂಎಲ್ ತೆಹಿಲಿಯಾನಿ, 2008ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಪಾಕಿಸ್ತಾನ ಮೂಲದ ಕಸಬ್ ಅಪರಾಧಿಯಾಗಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ. ಮಂಗಳವಾರ ಕಸಬ್ ನಿಗೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು ಘೋಷಿಸಲಾಗುವುದು ಎಂದು ಹೇಳಿದರು.

ಮುಂಬೈ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ವಿಜಯ್ ಸಲಸ್ಕರ್, ಅಶೋಕ್ ಕಾಮ್ಟೆ ಹಾಗೂ ತುಕಾರಾಂ ಒಂಬ್ಳೆ ಸೇರಿ ಅನೇಕ ಯೋಧರನ್ನು ಹಾಗೂ ದಕ್ಷ ಅಧಿಕಾರಿಗಳನ್ನು ಕಸಬ್ ಕೊಂದಿರುವುದನ್ನು ಸ್ವತಃ ಅವನೇ ಒಪ್ಪಿಕೊಂಡಿದ್ದ. ಆದರೆ, ಲಷ್ಕರ್ ನಂಟು ಹಾಗೂ ಮುಂಬೈ ಭಯೋತ್ಪಾದನೆಯಲ್ಲಿ ಕೈವಾಡವಿದೆ ಎಂಬ ಆರೋಪದ ಮೇಲೆ ಫಾಹೀಮ್ ಅನ್ಸಾರಿ ಮತ್ತು ಸಬಾವುದ್ಧೀನ್ ಅವರನ್ನು ಬಂಧಿಸಲಾಗಿತ್ತು. ಸುದೀರ್ಘ ವಿಚಾರಣೆ ನಂತರ ಸೂಕ್ತ ಸಾಕ್ಷ್ಯ ದೊರೆಯದ ಕಾರಣ ಅವರಿಗೆ ನ್ಯಾಯಾಲಯ ಕ್ಲಿನ್ ಚಿಟ್ ನೀಡಿದೆ. ಈ ಸಂದರ್ಭದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ, ಕಸಬ್ ಪರ ವಕೀಲ ಕೆ ಪಿ ಪವಾರ್ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ಕಸಬ್ ವಿರುದ್ಧ 11 ಸಾವಿರ ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.

ಕಸಬ್ ಸೇರಿ ಲಷ್ಕರ್ ಇ ತೊಯ್ಬಾ ಸಂಘಟನೆಯಲ್ಲಿ ತರಬೇತಿ ಹೊಂದಿದ 10 ಮಂದಿ ಉಗ್ರರು ಸಮುದ್ರದ ಮೂಲಕ ಮುಂಬೈ ಪ್ರವೇಶಿಸಿ ಮನಬಂದಂತೆ ಗುಂಡಿನ ದಾಳಿ ನಡೆಸಿ ತಾಜ್, ಟ್ರೈಡೆಂಟ್ ಹೋಟೆಲ್ ಮತ್ತು ನಾರಿಮನ್ ಹೌಸ್ ನಲ್ಲಿ ಅಡಗಿ ಕುಳಿತಿದ್ದರು. ಅಲ್ಲಿರುವ ಜನರನ್ನು ಒತ್ತೆಯಾಳಾಗಿಸಿ ಅಮಾಯಕರನ್ನು ಹತ್ಯೆಗೈದಿದ್ದರು. ಘಟನೆಯಲ್ಲಿ ಸುಮಾರು 166 ಮಂದಿ ಸಾವನ್ನಪ್ಪಿದ್ದರು. 400 ಕ್ಕೂ ಮಂದಿ ಗಾಯಗೊಂಡಿದ್ದರು. ಭಾರತದ ಆರ್ಥಿಕತೆ ಬೀರಿದ ಈ ಘಟನೆ ಬೊಕ್ಕಸಕ್ಕೆ 4000 ಕೋಟಿ ರುಪಾಯಿ ನಷ್ಟವನ್ನುಂಟು ಮಾಡಿತ್ತು. ಉಗ್ರನನ್ನು ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಬೇಕು ಎನ್ನುವುದು ವೀರ ಯೋಧರ ಕುಟುಂಬ ಸದಸ್ಯರು ಸೇರಿದಂತೆ ಸಮಸ್ತ ಭಾರತೀಯರ ಒತ್ತಾಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X